SHIVAMOGGA LIVE NEWS | 10 JUNE 2024
BHADRAVATHI : ನರೇಂದ್ರ ಮೋದಿ ಕ್ಯಾಬಿನೆಟ್ನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ (Minister Of Steel) ಲಭಿಸಿದೆ. ಇದು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್ಎಲ್) ನೌಕರರಲ್ಲಿ ಸಂತಸ ಮೂಡಿಸಿದೆ. ಕಾರ್ಖಾನೆ ಪುನಶ್ಚೇತನದ ನಿರೀಕ್ಷೆ ಗರಿಗೆದರಿದೆ.
![]() |
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ನಿರ್ವಹಿಸುತ್ತಿರುವ ಭಾರತೀಯ ಉಕ್ಕು ಪ್ರಾಧಿಕಾರವು ಉಕ್ಕು ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತದೆ. ಈಗ ಹೆಚ್.ಡಿ.ಕುಮಾರಸ್ವಾಮಿ ಇದೇ ಉಕ್ಕು ಖಾತೆಯ ಸಚಿವರಾಗಿದ್ದಾರೆ.
ನೂತನ ಸಚಿವರಿಗೆ ಎಲ್ಲವು ಗೊತ್ತು
ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನ, ಕಾರ್ಮಿಕರ ಸಮಸ್ಯೆಗಳ ಕುರಿತು ನೂತನ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಎಲ್ಲ ವಿಚಾರಗಳು ಗೊತ್ತಿದೆ. ಈ ಹಿಂದೆ ಹಲವು ಬಾರಿ ಕಾರ್ಮಿಕರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಿದ್ದರು.
ಕುಮಾರಸ್ವಾಮಿ ಅವರಿಗೆ ಉಕ್ಕು ಖಾತೆ ನೀಡಿರುವುದು ತುಂಬಾ ಖುಷಿಯಾಗಿದೆ. ಈ ಹಿಂದೆ ವಿಐಎಸ್ಎಲ್ ಕಾರ್ಮಿಕರು ಅವರನ್ನು ಭೇಟಿಯಾಗಿ ಕಾರ್ಖಾನೆ ಪುನಶ್ಚೇತನದ ಕುರಿತು ಚರ್ಚೆ ನಡೆಸಿದ್ದೆವು. ಈಗ ಅವರು ಅಗತ್ಯ ಬಂಡವಾಳ ಹೂಡಿಕೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಸಂಸದ ರಾಘವೇಂದ್ರ ಅವರ ಕಾರಣದಿಂದ ಕಳೆದ ಕೆಲವು ವರ್ಷದಿಂದ ಕಾರ್ಖಾನೆ ಚಾಲನೆಯಲ್ಲಿತ್ತು. ಈಗ ಕುಮಾರಸ್ವಾಮಿ ಅವರಿಗೆ ಉಕ್ಕು ಖಾತೆ ದೊರೆತಿರುವುದರಿಂದ ಕಾರ್ಮಿಕರು ಸಂತಸಗೊಂಡಿದ್ದಾರೆ.ಜಗದೀಶ್, ಅಧ್ಯಕ್ಷ, ವಿಐಎಸ್ಎಲ್ ಕಾರ್ಮಿಕರ ಸಂಘ
ಕಾರ್ಮಿಕರ ಸಮಾವೇಶದಲ್ಲಿ ಭಾಗಿಯಾಗಿದ್ದರು
ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನ, ಬಂಡವಾಳ ಹೂಡಿಕೆ ಸಂಬಂಧ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಕಾರ್ಮಿಕರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು. ಪುನಶ್ಚೇತನಕ್ಕೆ ಮನವಿ ಮಾಡಿದ್ದರು. ಈ ಹಿಂದೆ ಕಾರ್ಖಾನೆ ಮುಂಭಾಗ ನಡೆದ ಸಮಾವೇಶದಲ್ಲಿಯು ಕುಮಾರಸ್ವಾಮಿ ಭಾಗಿಯಾಗಿದ್ದರು.
ಕುಮಾರಸ್ವಾಮಿ ಅವರು ಈ ಹಿಂದೆ ನಮ್ಮ ಸರ್ಕಾರ ಬಂದರೆ, ರಾಜ್ಯದಿಂದಲೆ ಕಾರ್ಖಾನೆಗೆ ಸಾವಿರ ಕೋಟಿ ಹೂಡಿಕೆ ಮಾಡುವ ಭರವಸೆ ನೀಡಿದ್ದರು. ಬೆಳಗಾವಿಯಲ್ಲಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೆವು. ಈಗ ಉಕ್ಕು ಖಾತೆ ದೊರೆತಿದೆ. ವಿಐಎಸ್ಎಲ್ ಉಳಿಯಲಿದೆ ಎಂಬ ಭರವಸೆ ಮೂಡಿದೆ. ಇವರ ಕಡೆಯಿಂದ ನಿರೀಕ್ಷೆ ಹೆಚ್ಚಾಗಿದೆ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮತ್ತೆ ಮನವಿ ಸಲ್ಲಿಸುತ್ತೇವೆ. ಕುಮಾರಸ್ವಾಮಿ, ಅಧ್ಯಕ್ಷ, ಎಐಟಿಯುಸಿ
ಅಪ್ಪ ಉಳಿಸಿದ್ದ ಕಾರ್ಖಾನೆ ಈಗ ಮಗನ ಕೈಗೆ
ವಿಐಎಸ್ಎಲ್ ಕಾರ್ಖಾನೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಈ ಹಿಂದೆ ಕೇಂದ್ರಕ್ಕೆ ಮನವಿ ಮಾಡಿತ್ತು. 1989ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರವು ಈ ಕಾರ್ಖಾನೆಯನ್ನು ತನ್ನ ಅಂಗ ಸಂಸ್ಥೆಯಾಗಿ ವಹಿಸಿಕೊಂಡಿತ್ತು. 1998ರಲ್ಲಿ ಉಕ್ಕು ಪ್ರಾಧಿಕಾರದೊಂದಿಗೆ ಕಾರ್ಖಾನೆ ವಿಲೀನವಾಯಿತು. ಹಾಗಾಗಿ ಕಾರ್ಖಾನೆ ಚೇತರಿಸಿಕೊಂಡು ಲಾಭದ ಹಳಿಯತ್ತ ಹೊರಳಿತ್ತು. ಈ ಬೆಳವಣಿಗೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಮುಖ ಪಾತ್ರ ವಹಿಸಿದ್ದರು. ಈಗ ವಿಐಎಸ್ಎಲ್ ಕಾರ್ಖಾನೆ ಪುನಃ ಸಂಕಷ್ಟದಲ್ಲಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಉಕ್ಕು ಖಾತೆ ವಹಿಸಿಕೊಂಡಿರುವುದು ಕಾರ್ಖಾನೆ ಉಳಿವಿನ ಕುರಿತು ಚರ್ಚೆ ಶುರುವಾಗಿದೆ
ಕೈ ತುಂಬಾ ಕೆಲಸ ಕೊಡಿ
ವಿಐಎಸ್ಎಲ್ನಲ್ಲಿ ಸದ್ಯ ಸಣ್ಣ ಪ್ರಮಾಣದ ಉತ್ಪಾದನೆಯಾಗುತ್ತಿದೆ. ಸುಮಾರು ಒಂದೂವರೆ ಸಾವಿರದಷ್ಟು ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ತಿಂಗಳಲ್ಲಿ 13 ರಿಂದ 18 ದಿನ ಕೆಲಸ ಸಿಗುತ್ತಿದೆ. ಕೆಲವೊಮ್ಮೆ ತಿಂಗಳಿಗೆ ಸರಿಯಾಗಿ ಸಂಬಳ ಬರುತ್ತಿಲ್ಲ ಎಂಬ ಆಪಾದನೆಯು ಇದೆ.
ಕಾರ್ಖಾನೆಗೆ ಹೊಸ ಯಂತ್ರೋಪಕರಣ ಅಳವಡಿಸಬೇಕಿದೆ. ಬ್ಲಾಸ್ಟ್ ಫರ್ನೇಸ್ (ಬಿ.ಎಫ್), ಸ್ಟೀಲ್ ಮೇಕಿಂಗ್ ಶಾಫ್ಟ್ (ಎಸ್ಎಂಎಸ್), ಬಾರ್ ಮಿಲ್, ನ್ಯೂ ರೋಲಿಂಗ್ ವಿಭಾಗದಲ್ಲಿ ಕೆಲಸ ಆರಂಭವಾಗಬೇಕಿದೆ. ಕಚ್ಛಾ ವಸ್ತುಗಳು ಹೊರಗಿನಿಂದ ಬರುತ್ತಿದ್ದು ಹೊರೆಯಾಗುತ್ತಿದೆ. ಉತ್ಪನ್ನಗಳಿಗೆ ಆರ್ಡರ್ ಬರಬೇಕಿದೆ. ಉಕ್ಕು ಖಾತೆ ವಹಿಸಿಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಮನಸು ಮಾಡಿದರೆ ಕಾರ್ಖಾನೆ ಪುನಶ್ಚೇತನಗೊಳ್ಳಲಿದೆ ಎಂಬುದು ಕಾರ್ಮಿಕರ ಅಭಿಪ್ರಾಯ.
ಪತ್ರಗಳು ಕೆಲಸ ಆರಂಭಿಸಲಿ
ವಿಐಎಸ್ಎಲ್ ಪುನಶ್ಚೇತನಕ್ಕೆ ಬಂಡವಾಳ ಹೂಡಿಕೆ ಮಾಡುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಪ್ರಧಾನಿಗೆ ಪತ್ರ ಬರೆದಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಖಾನೆ ಉಳಿವಿನ ಕುರಿತು ಉಕ್ಕು ಸಚಿವರಿಗೆ ಪತ್ರ ಬರೆದಿದ್ದರು. ಈಗ ಕುಮಾರಸ್ವಾಮಿ ಅವರು ಉಕ್ಕು ಖಾತೆ ಜವಾಬ್ದಾರಿ ಹೊತ್ತಿದ್ದು ಕಾರ್ಖಾನೆ ಉಳಿವಿನ ನಿರೀಕ್ಷೆ ಇಮ್ಮಡಿಯಾಗಿಸಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಗೀತಾ, ಶಿವರಾಜ್ ಕುಮಾರ್, ಭವಿಷ್ಯದ ಯೋಜನೆ ಪ್ರಕಟ, ಏನದು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200