SHIVAMOGGA LIVE NEWS, 9 FEBRUARY 2025
ಹೊಸನಗರ : ಉತ್ತರ ಪ್ರದೇಶದ ಆಗ್ರಾದಲ್ಲಿ ಹುತಾತ್ಮರಾದ ವಾಯುಸೇನೆ ವಾರಂಟ್ ಆಫೀಸರ್ ಸಿ.ಜಿ.ಮಂಜುನಾಥ್ (36) ಅವರ ಅಂತ್ಯಕ್ರಿಯೆ (Last Rites) ಹುಟ್ಟೂರು ಸಂಕೂರು ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಇದಕ್ಕೂ ಮುನ್ನ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯ ಜನರು ಪಾಲ್ಗೊಂಡಿದ್ದರು.
ಹೊಸನಗರ ತಾಲೂಕು ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕೂರು ಗ್ರಾಮದಲ್ಲಿ ಸಿ.ಜಿ.ಮಂಜುನಾಥ್ ಅವರ ಅಂತ್ಯಕ್ರಿಯೆ ನೆರವೇರಿತು.
ಹಳ್ಳಿ ಹಳ್ಳಿಯಲ್ಲೂ ಮಂಜುನಾಥ್ಗೆ ನಮನ
ಬೆಂಗಳೂರಿನಿಂದ ಇಂದು ಬೆಳಗ್ಗೆ ವಾಯುಸೇನೆ ಅಧಿಕಾರಿ ಸಿ.ಜಿ.ಮಂಜುನಾಥ್ ಅವರ ಪಾರ್ಥೀವ ಶರೀರ ಶಿವಮೊಗ್ಗಕ್ಕೆ ರವಾನಿಸಲಾಗಿತ್ತು. ಶಿವಮೊಗ್ಗದಿಂದ ಬೆಳಗ್ಗೆ ಹೊಸನಗರದತ್ತ ಹೊರಟ ಪಾರ್ಥೀವ ಶರೀರಕ್ಕೆ ಅಲ್ಲಲ್ಲಿ ಜನರು ನಮನ ಸಲ್ಲಿಸಿದರು. ಮಂಜುನಾಥ್ ಅಮರ್ ರಹೇ ಎಂದು ಘೋಷಣೆ ಮೊಳಗಿಸಿದರು.
ಹೊಸನಗರದಿಂದ ಸಂಕೂರು ಗ್ರಾಮದವರೆಗೆ ತಾಲೂಕು ಅಡಳಿತದ ವತಿಯಿಂದ ಮೆರವಣಿಗೆ ನಡೆಸಲಾಯಿತು. ವಿವಿಧ ಗ್ರಾಮಗಳ ಜನರು, ಶಾಲೆ, ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದರು.
ಮನೆ ಆವರಣದಲ್ಲಿ ಅಂತಿಮ ದರ್ಶನ
ಸೇನಾ ವಾಹನದಲ್ಲಿ ಮೆರವಣಿಗೆ ಮೂಲಕ ಪಾರ್ಥೀವ ಶರೀರವನ್ನು ಸಂಕೂರಿನಲ್ಲಿರುವ ಮನೆಗೆ ತರಲಾಯಿತು. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಹೆಚ್.ಹಾಲಪ್ಪ, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಸಾಗರ ಉಪ ವಿಭಾಗಾಧಿಕಾರಿ ಯತೀಶ್, ತಹಶೀಲ್ದಾರ್ ರಶ್ಮಿ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.
ಬಳಿಕ ಪಾರ್ಥೀವ ಶರೀರಕ್ಕೆ ಕುಟುಂಬದವರು ಪೂಜೆ ಸಲ್ಲಿಸಲು ಅವಕಾಶ ನೀಡಲಾಯಿತು. ಮನೆಯೊಳಗೆ ಪಾರ್ಥೀವ ಶರೀರ ಕೊಂಡೊಯ್ದು ವಿಧಿವಿಧಾನ ನಡೆಸಲಾಯಿತು.
ಪೊಲೀಸ್ ಗೌರವ ವಂದನೆ
ವಾಯುಸೇನೆ ಅಧಿಕಾರಿ ಸಿ.ಜಿ.ಮಂಜುನಾಥ್ ಅವರಿಗೆ ಹೊಸನಗರ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆ ನುಡಿಸಿತು. ಇದೇ ವೇಳೆ ಪೊಲೀಸರು ಮೂರು ಬಾರಿ ಕುಶಾಲುತೋಪು ಸಿಡಿಸಿದರು.
ವಾಯುಸೇನೆಯಿಂದಲು ಕುಶಾಲುತೋಪು
ವಾಯು ಸೇನೆಯಿಂದಲು ವಾರಂಟ್ ಆಫೀಸರ್ ಸಿ.ಜಿ.ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭ ಪಾರ್ಥೀವ ಶರೀರದ ಮುಂಭಾಗ ವಾಯುಸೇನೆಯಿಂದಲು ಮೂರು ಸುತ್ತು ಕುಶಾಲುತೋಪು ಸಿಡಿಸಲಾಯಿತು.
ಆಘಾತದಲ್ಲಿ ತಾಯಿ, ಪತ್ನಿಯಿಂದ ಮುತ್ತಿನ ವಿದಾಯ
ಮಂಜುನಾಥ್ ಅವರು ಮೃತರಾದ ವಿಷಯ ತಿಳಿದಾಗಿನಿಂದ ಅವರ ತಾಯಿ ನಾಗರತ್ನ ಆಘಾತಕ್ಕೊಳಗಾಗಿದ್ದರು. ಇವತ್ತು ಮಗನ ಮುಖ ದರ್ಶನವಾಗುತ್ತಿದ್ದಂತೆ ನಾಗರತ್ನ ಅವರು ಕಣ್ಣೀರಾದರು. ಇತ್ತ, ಮಂಜುನಾಥ್ ಅವರ ಪತ್ನಿ ಕಲ್ಪಿತಾ ಸಾಕಿಯಾ ಕಣ್ಣೀರಿಟ್ಟರು. ಮಂಜುನಾಥ್ ಅವರ ಹಣೆಗೆ ಮುತ್ತಿಟ್ಟು ಪತಿಗೆ ವಿದಾಯ ತಿಳಿಸಿದರು.
ಪತ್ನಿಗೆ ರಾಷ್ಟ್ರಧ್ವಜ ಹಸ್ತಾಂತರ
ಮಂಜುನಾಥ್ ಅವರ ಪಾರ್ಥೀವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಪತ್ನಿ ಕಲ್ಪಿತಾ ಸಾಕಿಯಾ ಅವರಿಗೆ ಹಸ್ತಾಂತರ ಮಾಡಲಾಯಿತು. ಅಂತ್ಯಸಂಸ್ಕಾರದ ಸಂದರ್ಭ ವಾಯುಸೇನೆಯ ಅಧಿಕಾರಿಗಳು ರಾಷ್ಟ್ರಧ್ವಜವನ್ನು ಒಪ್ಪಿಸಿದರು.
ಸಹೋದರನಿಂದ ಅಗ್ನಿಸ್ಪರ್ಶ
ಸಂಕೂರಿನಲ್ಲಿ ಮನೆಯ ಆವರಣದಲ್ಲಿಯೆ ಸಿ.ಜಿ.ಮಂಜುನಾಥ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈಡಿಗ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದವು. ಸಹೋದರ ಯುವರಾಜ್, ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.
ಇದನ್ನೂ ಓದಿ » ಹೊಸನಗರದಲ್ಲಿ ನೀರವ ಮೌನ, ಊರ ಮಗನನ್ನು ಕಳೆದುಕೊಂಡು ದುಃಖ, ಪ್ರಕರಣದ ತನಿಖೆಗೆ ಒತ್ತಾಯ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200