ಸಾಗರ: ನಗರದ ಕೆಳದಿ ರಸ್ತೆಯ ರೈಲ್ವೆ ಗೇಟ್ ಬಳಿ ಕೆಳ ಸೇತುವೆ ನಿರ್ಮಿಸುವ ಬದಲು ಮೇಲ್ಸೇತುವೆ (railway overbridge) ನಿರ್ಮಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೆಳದಿ ರಸ್ತೆಯ ರೈಲ್ವೆ ಗೇಟ್ ಬಳಿ ಕೆಳ ಸೇತುವೆ ನಿರ್ಮಾಣ ಸಂಬಂಧ ಸ್ಥಳ ಪರಿಶೀಲನೆಗೆ ರೈಲ್ವೆ ಇಲಾಖೆ ಅಧಿಕಾರಿಗಳು ಆಗಮಿಸಿದ್ದ ವೇಳೆ ಅವರೊಂದಿಗೆ ಸಮಾಲೋಚನೆ ನಡೆಸಿದ ಅವರು, ಕೆಳ ಸೇತುವೆ ನಿರ್ಮಿಸಿದರೆ ಆಗುವ ಅನಾನೂಕೂಲಗಳ ಕುರಿತು ತಿಳಿಸಿದರು.

ಕೆಳದಿ ರಸ್ತೆಯ ರೈಲ್ವೆ ಗೇಟ್ ಸಮೀಪ ವರದಾ ನದಿ ಹರಿಯುತ್ತಿದ್ದು ವರದಾ ಸೇತುವೆ ಇದೆ. ಅಲ್ಲಿ ಕೆಳಸೇತುವೆ ನಿರ್ಮಿಸುವುದರಿಂದ ಮಳೆಗಾಲದಲ್ಲಿ ನೀರು ಕೆಳ ಸೇತುವೆಯಲ್ಲಿ ನಿಂತು ಸಮಸ್ಯೆ ಉಂಟಾಗುತ್ತದೆ. ಈಗಾಗಲೇ ತಾಲೂಕಿನ ಅಡ್ಡೇರಿ ಗ್ರಾಮದಲ್ಲಿ ನಿರ್ಮಿಸಿರುವ ಕೆಳ ಸೇತುವೆಯಲ್ಲಿ ಈ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಾಗರದಿಂದ ಸೊರಬಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗದಲ್ಲಿ ರೈಲ್ವೆ ಗೇಟ್ ಬರುತ್ತಿದ್ದು, ಇಲ್ಲಿ ಹೆಚ್ಚಿನ ಜನ ಹಾಗೂ ವಾಹನಗಳ ಸಂಚಾರವಿದೆ. ಹೀಗಾಗಿ ಇಲ್ಲಿ ಸುಸಜ್ಜಿತವಾದ ಮೇಲ್ಸೇತುವೆ ನಿರ್ಮಿಸುವುದು ಸೂಕ್ತ. ಈ ಸಂಬಂಧ ಕೇಂದ್ರ ಸಚಿವ ವಿ. ಸೋಮಣ್ಣ, ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ‘ನಾನೂ ಸಚಿವ ಸ್ಥಾನದ ಅಕಾಂಕ್ಷಿ’, ಮಿನಿಸ್ಟರ್ ಪದವಿ ಬಗ್ಗೆ ಬೇಳೂರು ಏನೆಲ್ಲ ಹೇಳಿದರು?
ಪ್ರಮುಖರಾದ ಐ.ಎನ್. ಸುರೇಶ್ ಬಾಬು, ಗಣಪತಿ ಮಂಡಗಳಲೆ, ಮಂಜುನಾಥ್, ಡಿ.ದಿನೇಶ್, ಲೋಕೋಪಯೋಗಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.
