ಸಾಗರ: ಬಗರ್ಹುಕುಂ ಜಮೀನನ್ನು ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಅಂಬಾರಗೋಡ್ಲು ಅರಣ್ಯ ಕಚೇರಿ ಎದುರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ನೇತೃತ್ವದಲ್ಲಿ ಶುಕ್ರವಾರ ಅಹೋರಾತ್ರಿ ಧರಣಿ (overnight protest) ನಡೆಸಲಾಯಿತು.
ಮುರಕ್ಕಿ ಗ್ರಾಮದ ಯೋಗರಾಜ್ ಅವರ ಬಗರ್ ಹುಕುಂ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದಾರೆ. ಈ ಹಿನ್ನೆಲೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನೊಟೀಸ್ ನೀಡದೆ ಬೇಲಿ ಕಿತ್ತಿದ್ದಾರೆ
ಈ ಸಂದರ್ಭ ಮಾತನಾಡಿದ ಹರತಾಳು ಹಾಲಪ್ಪ, ಯೋಗರಾಜ್ ಅವರ ಕುಟುಂಬ ಶರಾವತಿ ಮುಳುಗಡೆ ಸಂತ್ರಸ್ತರಾಗಿದ್ದು, ಅನೇಕ ವರ್ಷಗಳಿಂದ ಇಲ್ಲಿ ವಾಸವಿದ್ದಾರೆ. ಅರಣ್ಯ ಅಧಿಕಾರಿಗಳು ನೊಟೀಸ್ ಸಹ ನೀಡದೆ ಬೇಲಿ ಕಿತ್ತು ಹಾಕಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ತರನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು.

ಕೇಂದ್ರ ಸಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಮಾತನಾಡಿ, ತಾಲೂಕಿನಲ್ಲಿ ಬೇರೆಬೇರೆ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುತ್ತಿರುವುದರ ಹಿಂದೆ ಷಡ್ಯಂತ್ರ ಇದೆ ಎಂದು ಆರೋಪಿಸಿದರು. ಮುಖಂಡ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಶಾಸಕರ ಆಪ್ತ ಸಹಾಯಕ ಫೋನ್ ಮಾಡಿದ ಹಿನ್ನೆಲೆ ಜಮೀನಿನ ಬೇಲಿ ಕಿತ್ತು ಹಾಕಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದರು.
ಅರಣ್ಯಾಧಿಕಾರಿಗಳು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಧರಣಿ ಹಿಂದಕ್ಕೆ ಪಡೆಯಲಾಯಿತು.
ಮಲೆನಾಡು ರೈತ ಹೋರಾಟ ವೇದಿಕೆ ಸಂಚಾಲಕ ತೀ.ನ.ಶ್ರೀನಿವಾಸ್, ಮುಖಂಡರಾದ ದೇವೇಂದ್ರಪ್ಪ ಯಲಕುಂದ್ರಿ, ಗಣೇಶ ಪ್ರಸಾದ್, ರತ್ನಾಕರ ಹೊನಗೋಡು, ಕೆ.ಜಿ.ಪ್ರಶಾಂತ್, ಸುಧೀಂದ್ರ, ನಾಗರಾಜ್ ಬೊಬ್ಬಿಗೆ, ಮಂಜಯ್ಯ ಜೈನ್, ಅರುಣ ಕುಪ್ಪೆ, ಪರಶುರಾಮ್, ವಿನೋದ್ ರಾಜ್, ಶಾಂತಪ್ಪ ಗೌಡ, ರಾಜೇಂದ್ರ, ಸುವರ್ಣ ಟೀಕಪ್ಪ, ರೂಪ, ಗಿರೀಶ್ ಗೌಡ ಮತ್ತಿತರರು ಇದ್ದರು.
ಇದನ್ನೂ ಓದಿ – ಸಿಗಂದೂರು ಲಾಂಚ್ ವಿಚಾರ, ಸರ್ಕಾರ ನಿರ್ಧಾರ ಪ್ರಕಟಿಸುವಂತೆ ಆಗ್ರಹ, ಏನಂದ್ರು ಪ್ರಸನ್ನ ಕೆರೆಕೈ?


About The Editor
ನಿತಿನ್ ಆರ್.ಕೈದೊಟ್ಲು






