ಸಾಗರ: ಶರಾವತಿ ಹಿನ್ನೀರಿನಲ್ಲಿ ಸೇತುವೆ ಲೋಕಾರ್ಪಣೆಯಾದ ಬಳಿಕ ಸಿಗಂದೂರು (Sigandur) ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇಂದು ದೇವಿ ಸನ್ನಿಧಿಗೆ ಭಾರಿ ಸಂಖ್ಯೆಯ ಭಕ್ತರು ಭೇಟಿ ನೀಡಿ, ದೇವಿಯ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ » ಹೊಸನಗರದ ಅಬ್ಬಿ ಫಾಲ್ಸ್ನಲ್ಲಿ ಬೆಂಗಳೂರಿನ ಯುವಕ ನೀರುಪಾಲು, ವಿಡಿಯೋ ವೈರಲ್
ಸಿಗಂದೂರು ಸೇತುವೆ ಲೋಕಾರ್ಪಣೆ ಬಳಿಕ ಇದೇ ಮೊದಲ ವೀಕೆಂಡ್. ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಸೇತುವೆ ಕಣ್ತುಂಬಿಕೊಂಡು, ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ.

ಪಾರ್ಕಿಂಗ್ ಸ್ಥಳದಲ್ಲಿ ಕಾಲಿಡಲು ಜಾಗವಿಲ್ಲ
ಸಿಗಂದೂರು ದೇಗುಲದ ಸಮೀಪದಲ್ಲಿರುವ ಪಾರ್ಕಿಂಗ್ ಸಾವಿರಾರು ವಾಹನಗಳು ನಿಂತಿವೆ. ಪಾರ್ಕಿಂಗ್ಗೆ ಜಾಗ ಸಿಗದೆ ನೂರಾರು ವಾಹನಗಳು ದೇವಸ್ಥಾನದ ಮುಂದೆ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಲಾಗಿದೆ.

ಈ ಮೊದಲು ಭಾರಿ ಜನ ಸಂಚಾರ ಇರುವ ಸಂದರ್ಭ ಲಾಂಚ್ನಲ್ಲಿ ವಾಹನಗಳನ್ನು ಹತ್ತಿಸುತ್ತಿರಲಿಲ್ಲ. ಲಾಂಚ್ ಇಳಿದ ಬಳಿಕ ಜನರು ಬಾಡಿಗೆ ಜೀಪುಗಳ ಮೂಲಕ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು. ಈಗ ಸೇತುವೆ ಲೋಕಾರ್ಪಣೆ ಆಗಿರುವುದರಿಂದ ಭಕ್ತರು ತಮ್ಮ ವಾಹನಗಳಲ್ಲಿಯೇ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ದೇವಸ್ಥಾನದ ಒಳಾಂಗಣದಲ್ಲಿಯು ಭಕ್ತರು ಸರತಿಯಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.
ಸೇತುವೆ ಮೇಲೆ ಫೋಟೊ, ಸೆಲ್ಫಿ

ಇನ್ನೊಂದೆಡೆ ಸಿಗಂದೂರು ಸೇತುವೆ ಮೇಲ್ಭಾಗ ಪ್ರವಾಸಿಗರು ಸೆಲ್ಫಿ, ಫೋಟೊಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು. ಕುಟುಂಬದವರು, ಸ್ನೇಹಿತರೊಂದಿಗೆ ಸಿಗಂದೂರು ದೇವಿ ಸನ್ನಿಧಿಗೆ ತೆರಳುವವರು ಸೇತುವೆ ಮೇಲೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.



