ಶಿವಮೊಗ್ಗ ಲೈವ್.ಕಾಂ | SAGARA NEWS | 03 JANUARY 2021
ಮಾನಸಿಕ ಅಸ್ವಸ್ಥೆಯೊಬ್ಬಳಿಗೆ ಊಟ, ಬಟ್ಟೆ, ಚಿಕಿತ್ಸೆ ಕೊಡಿಸಿ, ಆಕೆಯನ್ನು ಅನಾಥಶ್ರಮಕ್ಕೆ ಸೇರಿಸಿ ಸಾಗರದ ಯುವಕರ ತಂಡ ಮಾನವೀಯತೆ ಮೆರೆದಿದೆ. ಪೊಲೀಸರು, ಸಾಗರ ನಗರಸಭೆ ಅಧಿಕಾರಿಗಳು ಈ ಕಾರ್ಯದಲ್ಲಿ ಜೊತೆಯಾಗಿದ್ದರು.
ಎಲ್ಲಿ ಇದು? ಯಾರಿದು ಮಹಿಳೆ?
ಸಾಗರದ ಕೆಳದಿ ರಸ್ತೆಯ ರಾಣಿ ಚೆನ್ನಮ್ಮ ಸರ್ಕಲ್ನ ಬಸ್ ನಿಲ್ದಾಣದ ಬಳಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಪತ್ತೆಯಾಗಿದ್ದಾರೆ. ಅವರ ಹೆಸರು, ಊರು ಗೊತ್ತಾಗಿಲ್ಲ. ತೀವ್ರ ಚಳಿ ಮತ್ತು ರಾತ್ರಿ ವೇಳೆ ಮಹಿಳೆಯೊಬ್ಬಳು ಏಕಾಂಗಿಯಾಗಿ ಹೀಗೆ ಪಟ್ಟಣದಲ್ಲಿ ಇರುವುದು ಸುರಕ್ಷಿತವಲ್ಲ ಎಂದು ಮನಗಂಡ ಯುವಕರ ತಂಡ, ಆಕೆಯ ರಕ್ಷಣೆ ಮಾಡಿ, ಪೊಲೀಸರ ನೆರವಿನೊಂದಿಗೆ ಅನಾಥಾಶ್ರಮಕ್ಕೆ ಸೇರಿಸಿದ್ದಾರೆ.
ನೆರವಾದ ಸೋಷಿಯಲ್ ಟೀಂ
ದಲಿತ ಸಂಘರ್ಷ ಸಮಿತಿಯ ನಾಗರಾಜ್ ಅವರು ಮಹಿಳೆಯನ್ನು ಗಮನಿಸಿ, ಊಟ, ಬಟ್ಟೆ ವ್ಯವಸ್ಥೆ ಮಾಡಿದರು. ಸೋಷಿಯಲ್ ಟೀಂನ ಪತ್ರಕರ್ತ ಇಮ್ರಾನ್ ಸಾಗರ್ ಅವರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಸ್ಥಿತಿ ಕಂಡು ಕೂಡಲೆ ಕಾರ್ಯಪ್ರವೃತ್ತರಾದ ಇಮ್ರಾನ್ ಸಾಗರ್, ಪೊಲೀಸರು ಮತ್ತು ಸಾಗರ ನಗರಸಭೆಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ ತಮ್ಮ ಪರಿಚಿತ ಸಿದ್ದಾಪುರದ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥ ನಾಗರಾಜ್ ನಾಯ್ಕ್ ಅವರನ್ನು ಸಂಪರ್ಕಿಸಿ, ಮಹಿಳೆಯನ್ನು ಅಲ್ಲಿಗೆ ಸೇರಿಸಿದ್ದಾರೆ.
ಇನ್ಸ್ಪೆಕ್ಟರ್ ಅಶೋಕ್ ಕುಮಾರ್, ನಗರಸಭೆ ಆಯುಕ್ತ ನಾಗಪ್ಪ, ಪೋಲೀಸ್ ಸಿಬ್ಬಂದಿಗಳಾದ ಪ್ರತಿಭಾ, ಮಲ್ಲೇಶ್, ಸಂತೋಷ್ ಹಾಗೂ ಸೋಶಿಯಲ್ ಟೀಂನ ಅಣಲೇಕೊಪ್ಪದ ಅಬ್ಬಾಸ್, ಆಂಬುಲೆನ್ಸ್ ಫಯಾಜ್, ಬೆಂಗಳೂರಿನ ಜಾಕಿರ್ ಈ ಕಾರ್ಯದಲ್ಲಿ ಜೊತೆಯಾಗಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com