ಶಿವಮೊಗ್ಗ: ಸಂತೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೃದ್ಧೆಯೊಬ್ಬರ ಕುತ್ತಿಗೆಯಿಂದ ಅಪರಿಚಿತರಿಬ್ಬರು ಚಿನ್ನದ ಸರ (gold chain) ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆಯನೂರು ಸಂತೆಗೆ ಹೋಗಿದ್ದಾಗ ಘಟನೆ ನಡೆದಿದೆ.
ಹರನಹಳ್ಳಿ ರಸ್ತೆಯ ನಿವಾಸಿ ಸೌಭಾಗ್ಯ (65) ಎಂಬುವವರು ಸರ ಕಳೆದುಕೊಂಡವರು. ಆಯನೂರು ಸಮೀಪದ ಸುಣಗಾರ್ ಬೀದಿಯ ಆಂಜನೇಯ ದೇವಾಸ್ಥಾನದ ಬಳಿ ಈ ಕೃತ್ಯ ನಡೆದಿದೆ.

ಇದನ್ನೂ ಓದಿ : ಯಶವಂತಪುರ – ತಾಳಗುಪ್ಪ ಮಧ್ಯೆ ಬೇಸಿಗೆ ವಿಶೇಷ ರೈಲು, ವೇಳಾಪಟ್ಟಿ ಪ್ರಕಟ
ಹೇಗಾಯ್ತು ಘಟನೆ?
ಸೌಭಾಗ್ಯ ಅವರು ಆಯನೂರು ಸಂತೆಯಲ್ಲಿ ವ್ಯಾಪಾರ ಮುಗಿಸಿ ಸಂಜೆ ಮನೆಗೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ವ್ಯಕ್ತಿಯೊಬ್ಬ ಏಕಾಏಕಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ತಕ್ಷಣವೇ ಸಮೀಪದಲ್ಲಿ ಸಿದ್ಧವಾಗಿ ನಿಂತಿದ್ದ ಬಿಳಿ ಬಣ್ಣದ ದ್ವಿಚಕ್ರ ವಾಹನ ಏರಿ ತನ್ನ ಸಹಚರನೊಂದಿಗೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಾಹನಕ್ಕೆ ನಂಬರ್ ಪ್ಲೇಟ್ ಇರಲಿಲ್ಲ
ಎರಡು ಎಳೆಯ ಮಾಂಗಲ್ಯ ಸರವು ಸುಮಾರು 80 ಗ್ರಾಂ ತೂಕವಿತ್ತು. ಅದರ ಅಂದಾಜು ಮೌಲ್ಯ ₹3.60 ಲಕ್ಷ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಾಂಗಲ್ಯ ಸರ ಕಸಿದುಕೊಂಡು ಓಡಿದ ವ್ಯಕ್ತಿ ಕ್ಯಾಪ್ ಧರಿಸಿದ್ದ. ಬೈಕ್ ಚಲಾಯಿಸುತ್ತಿದ್ದವನು ಹೆಲ್ಮೆಟ್ ಧರಿಸಿದ್ದ. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
