ಶಿವಮೊಗ್ಗ ಲೈವ್.ಕಾಂ | SHIMOGA NEWS | 29 JUNE 2021
ಲಾಕ್ ಡೌನ್, ವಾರಾಂತ್ಯದ ಕರ್ಫ್ಯೂ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಕೆಯತ್ತ ಹೆಜ್ಜೆ ಇಟ್ಟಿದೆ. ಪ್ರವಾಸಿ ತಾಣಗಳತ್ತ ಪ್ರವಾಸಿಗರ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದೆ.
ಜೋಗ ಜಲಪಾತ ಪ್ರವಾಸಿಗರಿಗೆ ಮುಕ್ತವಾಗಿದೆ. ಮೊದಲ ದಿನ ರಾಜ್ಯದ ವಿವಿಧೆಡೆಯ ಪ್ರವಾಸಿಗರು ಜೋಗಕ್ಕೆ ಬಂದಿದ್ದರು. ರಾಜ, ರಾಣಿ, ರೊರರ್, ರಾಕೆಟ್ ಜಲಪಾತಗಳ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡರು.
ಜೋಗಕ್ಕೆ ದೂರದೂರುಗಳಿಂದ ಪ್ರವಾಸಿಗರು
ಮೊದಲ ದಿನ 991 ಪ್ರವಾಸಿಗರು ಜೋಗಕ್ಕೆ ಬಂದಿದ್ದರು. 150 ವಾಹನಗಳು ಜೋಗದ ಗೇಟಿನೊಳಗೆ ಪ್ರವೇಶ ಪಡೆದಿದ್ದವು. ಹಾಗಾಗಿ ಸೋಮವಾರ ಒಂದೆ ದಿನ ಜೋಗ ನಿರ್ವಹಣಾ ಪ್ರಾಧಿಕಾರಕ್ಕೆ 20 ಸಾವಿರದಷ್ಟು ಆದಾಯ ಬಂದಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಾತ್ರ ಜೋಗ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ.
ಸಫಾರಿ ಇವತ್ತೂ ಓಪನ್
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೂ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸೋಮವಾರ 206 ಮಂದಿ ಭೇಟಿ ಕೊಟ್ಟಿದ್ದರು. ಎರಡು ತಿಂಗಳು ಲಾಕ್ ಡೌನ್ ಇದ್ದಿದ್ದರಿಂದ ಸಿಂಹಧಾಮವು ಬಂದ್ ಆಗಿತ್ತು. ಹಲವು ಪ್ರಾಣಿ, ಪಕ್ಷಿಗಳನ್ನು ಒಟ್ಟಿಗೆ ಕಾಣಲು ಅವಕಾಶವಿರುವುದರಿಂದ ದೊಡ್ಡ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಪ್ರತಿ ಮಂಗಳವಾರ ಸಿಂಹಧಾಮಕ್ಕೆ ರಜೆ ಇರುತ್ತಿತ್ತು. ಆದರೆ ವೀಕೆಂಡ್ ಕರ್ಫ್ಯೂ ಮುಗಿಯುವವರೆಗೆ ಮಂಗಳವಾರದ ರಜೆಯನ್ನು ನಿರ್ಬಂಧಿಸಲಾಗಿದೆ. ಪ್ರತಿ ಮಂಗಳವಾರವು ಸಿಂಹಧಾಮ ಪ್ರವಾಸಿಗರಿಗೆ ಮುಕ್ತವಿರಲಿದೆ.
ರಾಷ್ಟ್ರಕವಿ ಮನೆಗೆ ನೂರು ಮಂದಿ
ಸೋಮವಾರದಿಂದ ತೀರ್ಥಹಳ್ಳಿಯ ಕುಪ್ಪಳಿಯ ಕವಿಮನೆ, ಕವಿಶೈಲವು ಪ್ರವಾಸಿಗರಿಗೆ ಮುಕ್ತವಾಗಿದೆ. ಕುಪ್ಪಳಿ ಕವಿಮನೆಗೆ ಮೊದಲ ದಿನ 100 ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಇದರ ಜೊತೆಗೆ ತೀರ್ಥಹಳ್ಳಿಯ ಆಗುಂಬೆ, ಕುಂದಾದ್ರಿಗೂ ಪ್ರವಾಸಿಗರು ಆಗಮಿಸಿದ್ದರು. ಆದರೆ ಟೂರಿಸ್ಟ್ಗಳ ಸಂಖ್ಯೆ ಕಡಿಮೆ ಎಂದು ಅಂದಾಜಿಸಲಾಗಿದೆ.
ವೀಕೆಂಡ್ನಲ್ಲಿ ಎಲ್ಲವು ಬಂದ್
ವೀಕೆಂಡ್ ಕರ್ಫ್ಯೂ ಸಂದರ್ಭ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳೆಲ್ಲವು ಬಂದ್ ಆಗಲಿವೆ. ಸರ್ಕಾರದ ಸೂಚನೆ ಮೇರೆಗೆ ಜೋಗ ಸೇರಿದಂತೆ ಎಲ್ಲ ಟೂರಿಸ್ಟ್ ಸ್ಪಾಟ್ಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200