ಶಿವಮೊಗ್ಗ ಲೈವ್.ಕಾಂ | SHIKARIPURA NEWS | 15 MAY 2021
ಕರೋನ ಸೋಂಕಿತರಿಗೆ ಹಾಸಿಗೆ, ಆಕ್ಸಿಜನ್ ಸಿಗದೆ ನರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಸದ ರಾಘವೇಂದ್ರ ಅವರು ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಗೆ ಜನಪರ ಕಾಳಜಿಗಿಂತ ಕಮಿಷನ್ ಆಸೆಗೆ ದೊಡ್ಡದಾಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಳ್ಳಿ ದರ್ಶನ್ ಆರೋಪಿಸಿದ್ದಾರೆ.
ಶಿಕಾರಿಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಉಳ್ಳಿ ದರ್ಶನ್, ಜನರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ತಾಲೂಕಿನ ಶಾಸಕರಂತೆ ಇರುವ ಸಂಸದರಿಗೆ ಕಮಿಷನ್ ಚಿಂತೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿರಾ ಕ್ಯಾಂಟೀನ್ ಮಾಡಲಿಲ್ಲ
ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೊಳಿಸಿದಾಗ, ಯಡಿಯೂರಪ್ಪ ಮತ್ತು ರಾಘವೇಂದ್ರ ಅವರು ವಿರೋಧಿಸಿದರು. ಶಿಕಾರಿಪುರ ಪಟ್ಟಣದಲ್ಲಿ ಈತನಕ ಇಂದಿರಾ ಕ್ಯಾಂಟೀನ್ ಆರಂಭಿಸಿಲ್ಲ. ಒಂದು ವೇಳೆ ಆರಂಭ ಮಾಡಿದ್ದರೆ, ಈಗ ಬಡವರಿಗೆ ಅನುಕೂಲವಾಗುತ್ತಿತ್ತು. ಶೀಘ್ರದಲ್ಲಿ ಶಿಕಾರಿಪುರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು. ಇಲ್ಲವಾದಲ್ಲಿ ಉಳ್ಳಿ ಫೌಂಡೇಶನ್ ವತಿಯಿಂದ ಬಡವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ದರ್ಶನ್ ತಿಳಿಸಿದರು.
ನ್ಯಾಯಾಲಯದ ಕ್ಷಮೆ ಕೇಳಬೇಕು
ನ್ಯಾಯಾಧೀಶರೆಲ್ಲ ಸರ್ವಜ್ಞರಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ. ಈ ಹೇಳಿಕೆಯಿಂದ ನ್ಯಾಯಾಲಯಕ್ಕೆ ಅಗೌರವ ತಂದಿದ್ದಾರೆ. ಕೂಡಲೆ ಅವರು ನ್ಯಾಯಾಲಯದ ಕ್ಷಮೆ ಕೇಳಬೇಕು ಎಂದು ದರ್ಶನ್ ಉಳ್ಳಿ ಆಗ್ರಹಿಸಿದರು.
ಇದನ್ನೂ ಓದಿ | ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಚುರುಕು, ಸಂಸದರ ನೇತೃತ್ವದ ತಂಡದಿಂದ ಪರಿಶೀಲನೆ, ಕೆಲಸ ಎಷ್ಟಾಗಿದೆ?
ಕಾಂಗ್ರೆಸ್ ಮುಖಂಡರಾದ ಗಾಮದ ದಯಾನಂದ್, ರೇಣುಕಯ್ಯ, ರಾಜು ಉಡುಗಣಿ, ಸುರೇಶ್ ಧಾರವಾಡ ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]