ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಸೆಪ್ಟೆಂಬರ್ 2021
ತಾಲೂಕಿನ ಉದ್ರಿ ಗ್ರಾಮದ ಪ್ರೌಢಶಾಲಾ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿಗೆಂದು ದಾನ ನೀಡಿದ ಜಾಗ ಪರಭಾರೆ ಆಗಿದೆ ಎಂದು ಆರೋಪಿಸಿ ಉದ್ರಿ ಗ್ರಾಪಂ ವ್ಯಾಪ್ತಿಯ ಜನರು ಗ್ರಾಮದ ಮುಖ್ಯ ರಸ್ತೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ, ನಂತರ ಶಾಲಾವರಣದಲ್ಲಿ ಸಭೆ ನಡೆಸಿದರು.
ಭೂದಾನಿ, ಸಣ್ಣ ಬಸವಲಿಂಗಪ್ಪ ಮಾತನಾಡಿ, 45 ವರ್ಷಗಳ ಹಿಂದೆ ಉದ್ರಿ ಗ್ರಾಮದ ಪ್ರೌಢಶಾಲಾ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿಗೆಂದು ಹನುಮಂತ ರಾವ್ ನಾಡಿಗೇರ, ಅವರು ಸರ್ವೇ ನಂ.139ರಲ್ಲಿರುವ 2.10 ಎಕರೆ ಜಾಗವನ್ನು ದಾನವಾಗಿ ನೀಡಿದ್ದರು. 1.5 ಎಕರೆ ಜಾಗದಲ್ಲಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮಾಜ ಕಲ್ಯಾಣ ಇಲಾಖೆ 20 ವರ್ಷಗಳ ಹಿಂದೆ ವಿದ್ಯಾರ್ಥಿನಿಲಯ ನಿರ್ಮಿಸಿದೆ. ಆದರೆ 2 ವರ್ಷಗಳ ಹಿಂದೆ ದಾನಿ ಹನುಮಂತರಾವ್ ಅವರ ಮಗ ರಂಗನಾಥ ರಾವ್ ದಾನ ಪತ್ರ ಮಾಡಿಕೊಡುವ ಬದಲಿಗೆ ಗ್ರಾಮಸ್ಥರು, ಶಾಲೆ, ಇಲಾಖೆ ಸೇರಿ ಯಾರ ಗಮನಕ್ಕೆ ತರದೆ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನಪ್ಪ ಅವರಿಗೆ ಖರೀದಿಗೆ ಕೊಟ್ಟಿದ್ದಾರೆ ಎಂದು ದೂರಿದರು.
ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ ಮಾತನಾಡಿ, ಉದ್ರಿ ಗ್ರಾಮದ ಸರ್ವೇ ನಂ.139ರಲ್ಲಿ ಹಾಸ್ಟೆಲ್ ಹಾಗೂ ಖಾಲಿ ಜಾಗವಿದ್ದರೂ ಸರ್ವೇ ಹಾಗೂ ಕಂದಾಯಾಧಿಕಾರಿಗಳು ಪಹಣಿಯಲ್ಲಿ ಅಡಕೆ ತೋಟವಿದೆ ಎಂದು ದೃಢೀಕರಣ ನೀಡಿ ತಪ್ಪೆಸಗಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಭೂ ಸಾಗುವಳಿ ತಿದ್ದುಪಡಿ ಕಾನೂನಿನನ್ವಯ ಪಹಣಿಯಲ್ಲಿ ಹಾಸ್ಟೆಲ್ ಕಟ್ಟಡ, ಕಾಂಪೌಂಡ್ ಇರುವಂಥದ್ದನ್ನು ನಮೂದಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶಿವಾನಂದ ಪಿ.ರಾಣಿ, ಈ ಘಟನೆಗೆ ಸಂಬಂಧಿಸಿ ತನಿಖೆ ನಡೆಸಿ, ತಪ್ಪಾಗಿರುವುದು ಕಂಡಬಂದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಉದ್ರಿ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ, ಕೆ.ಯಲ್ಲಪ್ಪ, ಉದ್ರಿ ಗ್ರಾಮ ಸಮಿತಿ ಅಧ್ಯಕ್ಷ ಪ್ರಕಾಶ್, ಗ್ರಾಪಂ ಅಧ್ಯಕ್ಷೆ ಮನಸ್ವಿನಿ ಸುರೇಶ್, ಉಪಾಧ್ಯಕ್ಷ ಬಸವರಾಜ್, ಸಿ.ಕೆ.ಬಲೀಂದ್ರಪ್ಪ ಚಿಕ್ಕಾವಲಿ, ಮನೋಜ್, ಚಂದ್ರಪ್ಪ ಯಲವಾಟ, ಕೆರಿಯಪ್ಪ ಎಡಗೊಪ್ಪ, ಚನ್ನಬಸಪ್ಪ ಚಿಕ್ಕಾವಲಿ, ಹನುಮಂತಪ್ಪ ಗುಡೇಕೊಪ್ಪ, ಗಿರಿಯಪ್ಪ ಬಿದರಿಗೇರಿ, ಚಂದ್ರಪ್ಪ ವಡ್ಡಿಗೇರಿ, ಮಂಜುನಾಥ್ ಮಂಚಿ, ದೇಸಾಯಿ ಗೌಡ ಉದ್ರಿ, ತಾರ್ಕೇಶ್ ಉದ್ರಿ, ಚಿರಂಜೀವಿ ಇತರರಿದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200