SHIVAMOGGA LIVE NEWS | 16 APRIL 2024
ELECTION SPECIAL : ತುರ್ತು ಪರಿಸ್ಥಿತಿ ಕಾರಣಕ್ಕೆ ಅಧಿಕಾರ ಕಳೆದುಕೊಂಡಿದ್ದ ಇಂದಿರಾ ಗಾಂಧಿ ಮತ್ತೆ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. 1977ರಲ್ಲಿ ಕಾಂಗ್ರೆಸ್ ಸೋಲಿಸಿ ಗದ್ದುಗೆ ಹಿಡಿದಿದ್ದ ಜನತಾ ಪಕ್ಷಗಳು ಒಗ್ಗಟು ಕಾಯ್ದುಕೊಳ್ಳಲಾಗದೆ ಸರ್ಕಾರ ಪತನವಾಗಿತ್ತು. ಹಾಗಾಗಿ 1980ರ ಲೋಕಸಭೆ ಚುನಾವಣೆ ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿತ್ತು. ಎಲ್ಲೆಲ್ಲು ಇಂದಿರಾ ಗಾಂಧಿ ಅಲೆ ಇತ್ತು. ಈ ಹೊತ್ತಿಗೆ ಕಾಂಗ್ರೆಸ್ ಪಕ್ಷವು ಹೋಳಾಗಿತ್ತು.
ವಿಐಎಸ್ಎಲ್ ಅಧಿಕಾರಿ ಸಂಸದರಾದರು
1977ರಲ್ಲಿ ಎ.ಆರ್.ಬದರಿನಾರಾಯಣ ಶಿವಮೊಗ್ಗದ ಸಂಸದರಾಗಿದ್ದರು. 1980ರ ಚುನಾವಣೆಯಲ್ಲಿ ಅವರು ದೇವರಾಜು ಅರಸು ಅವರ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಜನತಾ ಪಕ್ಷದ ಅಭ್ಯರ್ಥಿಯಾಗಿ ಡಿ.ಹೆಚ್.ಶಂಕರಮೂರ್ತಿ, ಜನತಾ ಪಕ್ಷ (ಸೆಕ್ಯೂಲರ್)ದಿಂದ ಕೋಣಂದೂರು ಲಿಂಗಪ್ಪ ಅವರು ಕಣಕ್ಕಿಳಿದಿದ್ದರು. ಇಂದಿರಾ ಗಾಂಧಿ ಕಾಂಗ್ರೆಸ್ನಿಂದ ಹೊಸ ಮುಖಕ್ಕೆ ಅವಕಾಶ ನೀಡಲಾಗಿತ್ತು. ವಿಐಎಸ್ಎಲ್ನ ಅಧಿಕಾರಿ ಎಸ್.ಟಿ.ಖಾದ್ರಿ ಇಂದಿರಾ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು.
ಇಂಜಿನಿಯರ್, ಸ್ಟೀಲ್ ಸ್ಪೆಷಲಿಸ್ಟ್
ಎಸ್.ಟಿ.ಖಾದ್ರಿ ಮೂಲತಃ ರಾಯಚೂರಿನ ಕೊಪ್ಪಳದವರು (ಈಗ ಕೊಪ್ಪಳ ಪ್ರತ್ಯೇಕ ಜಿಲ್ಲೆಯಾಗಿದೆ). ಇಂಜಿನಿಯರ್ ಮತ್ತು ಸ್ಟೀಲ್ ಸ್ಪೆಷಲಿಸ್ಟ್ ಆಗಿದ್ದ ಎಸ್.ಟಿ.ಖಾದ್ರಿ ಅವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಅಧಿಕಾರಿಯಾಗಿದ್ದರು. ವಿಐಎಸ್ಎಲ್ ಕಾರ್ಖಾನೆ ವಿಸ್ತರಣೆಗಾಗಿ ದೇಶ, ವಿದೇಶಕ್ಕೆ ಸಂಚರಿಸಿದ್ದರು. 1976ರಲ್ಲಿ ತಮಿಳುನಾಡಿನ ಸೇಲಂ ಸ್ಟೀಲ್ ಪ್ಲಾಂಟ್ನ ನಿರ್ದೇಶಕರಾಗಿ ಸರ್ಕಾರ ಅವರನ್ನು ನೇಮಿಸಿತ್ತು. ಸಾಮಾಜಿಕ ಚುಟವಟಿಕೆ, ಶಿವಮೊಗ್ಗ, ಭದ್ರಾವತಿಯಲ್ಲಿ ವಿವಿಧ ಶೈಕ್ಷಣಿಕ ಸಂಸ್ಥೆಗಳ ಆರಂಭಕ್ಕೆ ಕಾರಣವಾಗಿದ್ದರು. ದಿಢೀರ್ ಬೆಳವಣಿಗೆಯಲ್ಲಿ ಎಸ್.ಟಿ.ಖಾದ್ರಿ ಅವರನ್ನು ಇಂದಿರಾ ಕಾಂಗ್ರೆಸ್ನಿಂದ ಲೋಕಸಭೆ ಚುನಾವಣಾ ಕಣಕ್ಕಿಳಿಸಲಾಯಿತು. ಇಂದಿರಾ ಅಲೆ, ಜನತಾ ಪಕ್ಷದ ವಿರುದ್ಧ ಜನರ ಮುನಿಸು, ಎಸ್.ಟಿ.ಖಾದ್ರಿ ಅವರ ಸಾಮಾಜಿಕ ಕಾರ್ಯಗಳ ಕಾರಣಕ್ಕೆ ಗೆಲುವು ದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದ ಈ ಸಂಸದ ಮೂರೇ ವರ್ಷಕ್ಕೆ ಅಧಿಕಾರ ಕಳೆದುಕೊಂಡಿದ್ದರು, ಯಾಕೆ?