SHIVAMOGGA LIVE NEWS | SHIMOGA | 21 ಜೂನ್ 2022
ಪೊಲೀಸ್ ಸಿಬ್ಬಂದಿಯೊಬ್ಬರ ಎದೆಗೆ ಚಾಕು ಹಾಕಿ ಪರಾರಿಯಾಗಿದ್ದ ಆರೋಪಿಗೆ ಶಿವಮೊಗ್ಗ ಪೊಲೀಸರು ಗುಂಡು ಹೊಡೆದಿದ್ದಾರೆ. ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಆತನ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ.
ರಾಬರಿ ಕೇಸ್’ಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಶಾಹಿದ್ ಖುರೇಶಿಯ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬಲಗಾಲಿನ ಮಂಡಿಯ ಕೆಳಗೆ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿಯನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೊಲೀಸರ ಮೇಲೆ ದಾಳಿ ಮಾಡಿದ್ದ
ತಲೆಮರೆಸಿಕೊಂಡು ಓಡಾಡುತ್ತಿದ್ದ ರಾಬರಿ ಕೇಸ್’ನ ಪ್ರಮುಖ ಆರೋಪಿ ಶಾಹಿದ್ ಖುರೇಶಿಯನ್ನು ಇವತ್ತು ಪೊಲೀಸರು ಬಂಧಿಸಲು ಮುಂದಾಗಿದ್ದರು. ಈ ವೇಳೆ ಚಾಕುವಿನಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಶಾಹಿದ್ ಖುರೇಶಿ ಪರಾರಿಯಾಗಿದ್ದ.
ಕೆಲವೆ ಗಂಟೆಯಲ್ಲಿ ರಾಜೀವ್ ಗಾಂಧಿ ಬಡಾವಣೆಯಲ್ಲಿ ಆರೋಪಿ ಪತ್ತೆಯಾಗಿದ್ದಾನೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಶಾಹಿದ್ ಖುರೇಶಿಯನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಪುನಃ ಚಾಕುವಿನಿಂದ ದಾಳಿಗೆ ಪ್ರಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಯಾರಿದು ಶಾಹಿದ್ ಖುರೇಷಿ?
ಶಾಹಿದ್ ಖುರೇಶಿ, ಶಿವಮೊಗ್ಗದ ಲಷ್ಕರ್ ಮೊಹಲ್ಲಾ ನಿವಾಸಿ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ರಾಬರಿ ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ.
ಕಳೆದ ತಿಂಗಳು ಶಾಹಿದ್ ಖುರೇಶಿ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲಾಗಿತ್ತು. ಮೇ 5ರಂದು ಆರ್.ಎಂ.ಎಲ್ ನಗರದಲ್ಲಿ ಸದ್ದಾಂ ಹುಸೇನ್ ಎಂಬುವವರನ್ನು ಖುರೀಷಿ ಮತ್ತು ಆತನ ಇಬ್ಬರು ಸಹಚರರು ಅಡ್ಡಗಟ್ಟಿ ಬೆದರಿಕೆ ಒಡ್ಡಿದ್ದರು. 8 ಸಾವಿರ ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಶಾಹಿದ್ ಖುರೇಷಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಮಾಹಿತಿ ಸಿಕ್ಕ ಹಿನ್ನೆಲೆ ದೌಡು
ಶಾಹಿದ್ ಖುರೇಶಿಗಾಗಿ ದೊಡ್ಡಪೇಟೆ ಠಾಣೆ ಪೊಲೀಸರು ಕಳೆದ ಎರಡು ತಿಂಗಳಿಂದ ಶೋಧ ಕಾರ್ಯ ನಡೆಸುತ್ತಿದ್ದರು. ಇವತ್ತು ಆತ ಕೆ.ಆರ್.ಪುರಂ ಬಳಿ ಇರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಲು ಪೊಲೀಸರು ತೆರಳಿದ್ದರು. ‘ಸಾಮಾನ್ಯವಾಗಿ ಇಂತಹ ಸಂದರ್ಭ ಪೊಲೀಸರು ಸಿದ್ಧತೆ ಮಾಡಿಕೊಂಡು ಸ್ಥಳಕ್ಕೆ ತೆರಳುತ್ತಾರೆ. ಆದರೆ ಇವತ್ತು ತುರ್ತಾಗಿ ಮಾಹಿತಿ ಲಭ್ಯವಾಗಿದ್ದರಿಂದ ಸಿದ್ಧತೆ ಇಲ್ಲದೆ ತೆರಳಿದ್ದರು. ಆಗ ಆರೋಪಿ ಶಾಹಿದ್ ಖುರೇಶಿ ಚಾಕುವಿನಿಂದ ದಾಳಿ ನಡೆಸಿದ್ದಾನೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.
ಚಾಕು ಚುಚ್ಚಿ ಪರಾರಿಯಾದ
ದೊಡ್ಡಪೇಟೆ ಠಾಣೆಯ ಕ್ರೈಮ್ ವಿಭಾಗದ ಸಿಬ್ಬಂದಿ ಗುರುನಾಯಕ್ ಮತ್ತು ರಮೇಶ್ ಅವರು ಶಾಹೀದ್ ಖುರೇಶಿ ಬಂಧಿಸಲು ತೆರಳಿದ್ದರು. ‘ಆರೋಪಿ ತನ್ನ ಸೊಂಟದಲ್ಲಿ ಚಾಕು ಇಟ್ಟುಕೊಂಡಿದ್ದ. ನಮ್ಮ ಸಿಬ್ಬಂದಿ ಆತನನ್ನು ಹಿಡಿಯಲು ಹೋದಾಗ ಚಾಕುವಿನಿಂದ ದಾಳಿ ಮಾಡಿದ್ದಾನೆ. ಸಿಬ್ಬಂದಿ ರಮೇಶ್ ಅವರ ಎಡಗೈಗೆ ಹಲ್ಲೆ ಮಾಡಿದ್ದಾನೆ. ಆಗ ಗುರುನಾಯಕ್ ಅವರು ಆರೋಪಿಯನ್ನು ಹಿಡಿದುಕೊಳ್ಳಲು ಮುಂದಾಗಿದ್ದಾರೆ. ಅವರ ಎದೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿ ಶಾಹೀದ್ ಪರಾರಿಯಾಗಿದ್ದಾನೆ.
ಈಗ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸಂಬಂಧ ಶಾಹಿದ್ ಖುರೇಶಿ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಈಗ ಹೇಗಿದ್ದಾರೆ ಪೊಲೀಸ್ ಸಿಬ್ಬಂದಿ?
ಘಟನೆ ಬೆನ್ನಿಗೆ ಗುರುನಾಯಕ್ ಮತ್ತು ರಮೇಶ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಬ್ಬರಿಗು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗುರುನಾಯಕ್ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ – BIG BREAKING | ಪೊಲೀಸ್ ಸಿಬ್ಬಂದಿ ಎದೆಗೆ ಚಾಕು ಇರಿದ ಆರೋಪಿ ಕಾಲಿಗೆ ಗುಂಡು
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.