SHIVAMOGGA LIVE NEWS | 29 AUGUST 2023
AYANURU : ಬ್ಯಾಂಕಿಗೆ (Bank) ಬಂದ ಮಹಿಳೆಯೊಬ್ಬರು 20 ಸಾವಿರ ರೂ. ಹಣ ನೀಡುವಂತೆ ಪಟ್ಟು ಹಿಡಿದು ಸತತ ಮೂರು ಗಂಟೆ ರಂಪಾಟ ಮಾಡಿದ್ದಾಳೆ. ಮೈ ಮೇಲೆ ದೇವರು ಬಂದಿದೆ ಎಂದು ತಿಳಿಸಿ ಬ್ಯಾಂಕಿನಲ್ಲಿದ್ದವರಿಗೆ ಕೆಲಕಾಲ ಆತಂಕ ಮೂಡಿಸಿದ್ದಳು.
ಆಯನೂರಿಮ ಬ್ಯಾಂಕ್ ಒಂದರ ಗ್ರಾಹಕಿಯೊಬ್ಬಳು ಶಾಖೆಗೆ ಬಂದಿದ್ದು 20 ಸಾವಿರ ರೂ. ಚೆಕ್ ಕೊಟ್ಟು, ಹಣ ನೀಡುವಂತೆ ತಿಳಿಸಿದ್ದಳು. ಪರಿಶೀಲಿಸಿದಾಗ ಆಕೆಯ ಖಾತೆಯಲ್ಲಿ 2 ಸಾವಿರ ರೂ. ಮಾತ್ರ ಇತ್ತು. ಹಾಗಾಗಿ ಬ್ಯಾಂಕ್ ಸಿಬ್ಬಂದಿ ಹಣ ನೀಡಲು ಬರುವುದಿಲ್ಲ ಎಂದು ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡ ಮಹಿಳೆ ತನಗೆ 20 ಸಾವಿರ ರೂ. ಹಣ ಬೇಕೇಬೇಕು ಎಂದು ಪಟ್ಟು ಹಿಡಿದಿದ್ದಳು.
ಮೈ ಮೇಲೆ ಬಂತು ದೇವರು
ಬಹುಹೊತ್ತು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಮಹಿಳೆ ಕೊನೆಗೆ ಕೂದಲು ಕೆದರಿಕೊಂಡು ಮೈ ಮೇಲೆ ದೇವರು ಬಂದಂತೆ ಆಡಲು ಶುರು ಮಾಡಿದಳು. ಇದರಿಂದ ಬ್ಯಾಂಕ್ ಸಿಬ್ಬಂದಿ ಮತ್ತು ಇತರೆ ಗ್ರಾಹಕರು ಆತಂಕಕ್ಕೀಡಾದರು. ಬ್ಯಾಂಕಿನ ಮಧ್ಯದಲ್ಲಿ ಚೇರ್ ಹಾಕಿ ಕುಳಿತುಕೊಂಡ ಮಹಿಳೆ, ‘ನಾನು ದೇವರು, ನನಗೆ ದುಡ್ಡು ಕೊಡಿ. ಈಗ ಹೊಟ್ಟೆ ಹಸಿವಾಗುತ್ತಿದೆ’ ಎಂದು ಮಾತನಾಡಲು ಆರಂಭಿಸಿದರು.
ಇದನ್ನೂ ಓದಿ- ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ, ಶಾಶ್ವತ ಪರಿಹಾರಕ್ಕೆ ಮಹತ್ವದ ಸಭೆ, ಸಚಿವ ಮಧು ಹೇಳಿದ್ದೇನು?
ಬ್ಯಾಂಕಿಗೆ ಪೊಲೀಸರು ದೌಡು
ವಿಚಾರ ತಿಳಿಯುತ್ತಿದ್ದಂತೆ ಕುಂಸಿ ಠಾಣೆ ಪೊಲೀಸರು ಬ್ಯಾಂಕಿಗೆ ದೌಡಾಯಿಸಿದರು. ಮಹಿಳೆಯನ್ನು ಸಮಾಧಾನಿಸಿ ಕಳುಹಿಸಲು ಯತ್ನಿಸಿದರು. ಆದರೆ ತಾನು ದೇವರು ಎಂದು ಆಕೆ ತಿಳಿಸಿ ಬ್ಯಾಂಕಿನಲ್ಲಿ ಮತ್ತಷ್ಟು ಕೂಗಾಟ ಮಾಡಿದಳು. ಆಕೆಯ ಪರಿಸ್ಥಿತಿ ಗಮನಿಸಿದ ಪೊಲೀಸರು 500 ರೂ. ಹಣ ನೀಡಲು ಮುಂದಾದರು. ಆಗ ಆಕೆ, ‘ಇದು 500 ರೂ. ನನಗೆ 20 ಸಾವಿರ ರೂ. ಹಣ ಬೇಕು’ ಎಂದು ಹಠ ಹಿಡಿದಳು.
ಇದನ್ನೂ ಓದಿ- ಶಿವಮೊಗ್ಗದಿಂದ ವಿಮಾನ ಹಾರಾಟ ಶುರು | Shivamogga Airport
ತಾಯಿಯನ್ನು ಕರೆಯಿಸಿದ ಪೊಲೀಸರು
ಮಹಿಳೆಯ ತಾಯಿಯನ್ನು ಬ್ಯಾಂಕಿಗೆ ಕರಿಸಿದ ಪೊಲೀಸರು ಆಕೆಯನ್ನು ಸಮಾಧಾನಪಡಿಸಿದರು. ಮಹಿಳೆಯ ಅಸಹಾಯಕತೆ ಕಂಡು ಎಎಸ್ಐ ನಂಜುಂಡಪ್ಪ 500 ರೂ. ನೀಡಿ ಕಳುಹಿಸಿದರು. ಮಹಿಳೆ ಹೊರ ನಡೆಯುತ್ತಿದ್ದಂತೆ ಬ್ಯಾಂಕ್ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಈಕೆ ಆಯನೂರು ಸಮೀಪದ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಪಿಎಸ್ಐ ಶಾಂತರಾಜ್, ಎಎಸ್ಐ ನಂಜುಂಡಪ್ಪ, ಸಿಬ್ಬಂದಿ ಲಕ್ಷ್ಮಿ, ಹೆಡ್ ಕಾನ್ಸ್ಟೇಬಲ್ ಸತೀಶ್ ಸ್ಥಳಕ್ಕೆ ಆಗಮಿಸಿದ್ದರು.