ಶಿವಮೊಗ್ಗ ಲೈವ್.ಕಾಂ | SAGARA NEWS | 27 JUNE 2021
ಸಿಗಂದೂರು ಲಾಂಚ್ನಿಂದ ಶರಾವತಿ ನದಿಗೆ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಲಾಂಚ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಮಹಿಳೆ ಬದುಕುಳಿದಿದ್ದಾರೆ. ಕೂಡಲೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಾವೇರಿ ಜಿಲ್ಲೆ ಹಿರೇಕೆರೂರಿನ ರೇಣುಕಾ (46) ಎಂಬ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದು ಪಡೆದು ಮರಳುತ್ತಿದ್ದರು. ಹೊಳೆಬಾಗಿಲು ಕಡೆಯಿಂದ ಕಳಸವಳ್ಳಿ ಕಡೆಗೆ ಲಾಂಚ್ ಹತ್ತಿದ್ದರು. ಹೊಳೆಯ ಮಧ್ಯೆ ಭಾಗಕ್ಕೆ ಬರುತ್ತಿದ್ದಂತೆ ದಿಢೀರನೆ ಲಾಂಚ್ನಿಂದ ಜಿಗಿದಿದ್ದಾರೆ. ಮಹಿಳೆಯ ಜಿಗಿದಿದ್ದನ್ನು ಗಮನಿಸಿದ ಲಾಂಚ್ನಿಂದ ಪ್ರಯಾಣಿಕರು ಭಯಗೊಂಡಿದ್ದಾರೆ.
ಹೇಗಿತ್ತು ರಕ್ಷಣಾ ಕಾರ್ಯ?
ಮಳೆಯಿಂದಾಗಿ ಶರಾವತಿ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆಯಾಗಿದೆ. ಇನ್ನು ಹೊಳೆಯ ಮಧ್ಯ ಭಾಗವಾಗದ್ದರಿಂದ ಆಳವು ಹೆಚ್ಚು. ಹೀಗಿದ್ದು ಲಾಂಚ್ನಿಂದ ಮಹಿಳೆಯ ಜಿಗಿಯುತ್ತಿದ್ದಂತೆ ಸ್ಥಳೀಯರಾದ ಪ್ರಕಾಶ್ ಬೆಳಮಕ್ಕಿ ರಕ್ಷಣೆಗೆ ಮುಂದಾಗಿದ್ದಾರೆ. ಇವರಿಗೆ ಲಾಂಚ್ ಸಿಬ್ಬಂದಿ ನೆರವಾಗಿದ್ದಾರೆ.
ಮಹಿಳೆಯ ರಕ್ಷಣೆಗೆ ಮತ್ತು ಪ್ರಕಾಶ್ ಅವರಿಗೆ ಸೇಫ್ಟಿ ಟ್ಯೂಬ್ಗಳನ್ನು ನೀರಿಗೆ ಹಾಕಲಾಗಿತ್ತು. ಅಲ್ಲದೆ ಲಾಂಚನ್ನು ಮಹಿಳೆ ಬಳಿಗೆ ಕೊಂಡೊಯ್ಯಲಾಯಿತು. ಟ್ಯೂಬ್ನ ಸಹಾಯ ಮತ್ತು ಪ್ರಕಾಶ್ ಅವರ ನೆರವಿನಿಂದ ರೇಣುಕಾ ಅವರನ್ನು ರಕ್ಷಣೆ ಮಾಡಲಾಗಿದೆ.
ಸಿಬ್ಬಂದಿಯಿಂದ ಪ್ರಾಥಮಿಕ ಆರೈಕೆ
ರೇಣುಕಾ ಅವರನ್ನು ಲಾಂಚ್ನ ಮೇಲೆ ಕರೆತಂದು ಪ್ರಾಥಮಿ ಆರೈಕೆ ಮಾಡಲಾಯಿತು. ಲೈಫ್ ಜಾಕೆಟ್ ಹಾಕಲಾಯಿತು. ಲಾಂಚ್ ಅನ್ನು ದಡಕ್ಕೆ ತಂದು ರೇಣುಕಾ ಅವರನ್ನು ಕೂಡಲೆ ಆಸ್ಪತ್ರೆಗೆ ಕಳುಹಿಸಲಾಯಿತು. ಸದ್ಯ ರೇಣುಕಾ ಪ್ರಾಣಾಪಾಯದಿಂದ ಪಾರಾಗಿದ್ದರೆ ಎಂದು ಹೇಳಲಾಗುತ್ತಿದೆ.
ಸಮಯ ಪ್ರಜ್ಞೆ, ದಿಟ್ಟತನ ಮೆರೆದ ಸಿಬ್ಬಂದಿ
ಮಹಿಳೆ ಲಾಂಚ್ನಿಂದ ಜಿಗಿಯುತ್ತಿದ್ದಂತೆ ಸ್ಥಳೀಯರಾದ ಪ್ರಕಾಶ್ ದಿಟ್ಟತನ ತೋರಿಸಿದ್ದಾರೆ. ಕೂಡಲೆ ಹೊಳೆಗೆ ಜಿಗಿದಿದ್ದಾರೆ. ಸ್ಥಳೀಯರಾದ ಪ್ರಶಾಂತ್ ಸಿಗಂದೂರು, ಸುಧಾಕರ್, ಲಾಂಚ್ ಸಿಬ್ಬಂದಿಗಳಾದ ಗಜಕೋಶ, ಮಂಜುನಾಥ, ಬಲರಾಮ, ಜಗದೀಶ್ ಅವರು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು. ಇವರ ದಿಟ್ಟತನ ಮತ್ತು ಸಮಯ ಪ್ರಜ್ಞೆಯಿಂದ ಮಹಿಳೆ ಬದುಕುಳಿದಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಲು ಶರಾವತಿ ನದಿಯ ಮಧ್ಯ ಭಾಗಕ್ಕೆ ಜಿಗಿದವರ ರಕ್ಷಣೆಯಾಗಿ, ಪ್ರಾಣ ಉಳಿದಿರುವುದು ಇದೆ ಮೊದಲು ಎಂದು ಹೇಳಲಾಗುತ್ತಿದೆ. ವಿಚಾರ ತಿಳಿದು ಸಾಗರ ಗ್ರಾಮಾಂತರ ಠಾಣೆ ಪೊಲಿಸರು ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಪಡೆದಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200