SHIVAMOGGA LIVE NEWS | 15 MARCH 2024
BENGALURU : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಪಾದಿಸಿ ಆಕೆಯ ತಾಯಿ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾಗಿದೆ.
ಪ್ರಕರಣವೊಂದರ ಸಂಬಂಧ ನೆರವು ಕೇಳಿಕೊಂಡು ತಾಯಿ ಮತ್ತು ಮಗಳು ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಸದಾಶಿವನಗರದಲ್ಲಿ ಪ್ರಕರಣ ದಾಖಲಾಗಿದೆ.
ಎಫ್ಐಆರ್ನಲ್ಲಿ ಏನೇನು ಉಲ್ಲೇಖಿಸಲಾಗಿದೆ?
17 ವರ್ಷದ ಯುವತಿ ಮೇಲೆ ಈ ಹಿಂದೆ ಲೈಂಗಿಕ ದೌರ್ಜನ್ಯವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಮನವಿ ಮಾಡಲು ಯುವತಿ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರ ನಿವಾಸಕ್ಕೆ ಬಂದಿದ್ದರು. ‘9 ನಿಮಿಷ ತಮ್ಮೊಂದಿಗೆ ಮಾತನಾಡಿದ ಯಡಿಯೂರಪ್ಪ, ಟೀ ಕುಡಿಸಿದರು. ತಮ್ಮ ಮಗಳ ಕೈ ಹಿಡಿದುಕೊಂಡು ಮಾತನಾಡಿದರು. ಬಳಿಕ ಆಕೆಯನ್ನು ರೂಂಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆʼ ಎಂದು ತಾಯಿಯ ದೂರು ಆಧರಿಸಿ ದಾಖಲಾಗಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ಸಂಬಂಧ ಯಡಿಯೂರಪ್ಪ ಹೇಳಿದ್ದೇನು?
ಇನ್ನು, ತಮ್ಮ ವಿರುದ್ಧ ಎಫ್ಐಆರ್ ದಾಖಲಾಗಿರುವ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ‘ತಾಯಿ, ಮಗಳು ಅನೇಕ ಬಾರಿ ಇಲ್ಲಿ ಬರುತ್ತಿದ್ದರು. ಒಂದೂವರೆ ತಿಂಗಳ ಹಿಂದೆ ಇಲ್ಲಿ ಕಣ್ಣೀರು ಹಾಕುತ್ತ ನಿಂತಿದ್ದರು. ಇದನ್ನು ಗಮನಿಸಿ ಒಳಗೆ ಕರೆಯಿಸಿ ಸಮಸ್ಯೆ ಕೇಳಿದೆ. ತಮಗೆ ಅನ್ಯಾಯವಾಗಿದೆ ಎಂದು ತಿಳಿಸಿದರು. ಈ ಸಂಬಂಧ ಪೊಲೀಸ್ ಕಮಿಷನರ್ ದಯಾನಂದ್ ಅವರಿಗೆ ಕರೆ ಮಾಡಿ ನ್ಯಾಯ ಒದಗಿಸುವಂತೆ ಸೂಚಿಸಿದ್ದೆ. ಪೊಲೀಸ್ ಕಮಿಷನರ್ ಬಳಿ ಕಳುಹಿಸಿದ್ದೆ. ಆದರೆ ಅವರಿಬ್ಬರು ತಮ್ಮ ಕುರಿತಾಗಿ ಏನೇನೋ ಮಾತನಾಡಿದ್ದರು. ಕಷ್ಟ ಇದೆ ಎಂದಾಗ ಆ ದಿನ ನಾನೇ ಅವರಿಗೆ ಹಣಕಾಸು ನೆರವು ಕೂಡ ನೀಡಿದ್ದೆ. ಎಫ್ಐಆರ್ ದಾಖಲಾಗಿದ್ದು ಕಾನೂನಾತ್ಮಕವಾಗಿ ಎದುರಿಸುತ್ತೇನೆ. ಆದರೆ ಇದು ರಾಜಕೀಯ ಷಡ್ಯಂತ್ರವಲ್ಲʼ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಅಭ್ಯರ್ಥಿ ಘೋಷಣೆಯಾಗಿ ಒಂದು ವಾರ, ಕಾಂಗ್ರೆಸ್ನಲ್ಲಿ ಕಾಣದ ಚುನಾವಣಾ ಉತ್ಸಾಹ, ಕಾರಣವೇನು?