SHIVAMOGGA LIVE | 30 JULY 2023
SHIMOGA : ನಿಗದಿಯಂತೆ ಆ.11ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ (Airport) ವಿಮಾನ ಹಾರಾಟ ಆರಂಭವಾಗಬೇಕಿತ್ತು. ಆದರೆ ಆ.31ರಿಂದ ವಿಮಾನಯಾನ ಶುರುವಾಗುತ್ತಿದೆ. ಸೇವೆ 20 ದಿನ ವಿಳಂಬವಾಗಲು ಕಾರಣವೇನು? ಸಮಸ್ಯೆ ಪರಿಹರಿಸಿದ್ದು ಹೇಗೆ ಅನ್ನುವುದನ್ನು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ತಾಂತ್ರಿಕ ಕಾರಣವೇನು ಅನ್ನುವುದನ್ನು ತಿಳಿಸಿದರು.
ಏನದು 3 ಕಾರಣ?
ಕಾರಣ 1 : ಕೇಂದ್ರ ಸರ್ಕಾರದ ಬಾಂಬ್ ಥ್ರೆಟ್ ಕಂಟಿಂಜೆನ್ಸಿ ಪ್ಲಾನ್ (ಬಿಟಿಸಿಪಿ) ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Airport) ನೀಡಿದ್ದ ನಿರಾಕ್ಷೇಪಣ ಪತ್ರವನ್ನು ಜು.18ರಂದು ಹಿಂಪಡೆದಿದೆ. ಇದರಿಂದಾಗಿ ವಿಮಾನಯಾನ ಸೇವೆ ಆರಂಭ ವಿಳಂಬವಾಗಿದೆ. ನಾಗರಿಕ ವಿಮಾನಯಾನ ಸೇವೆಯ ಡಿಜಿ ಜುಲ್ಫಿಕರ್ ಹುಸೇನ್, ಕಾರ್ಯದರ್ಶಿ ರಾಜು ಬನ್ಸಾಲ್ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ – GOOD NEWS | ಬೆಂಗಳೂರು – ಶಿವಮೊಗ್ಗ ವಿಮಾನದ ಟಿಕೆಟ್ ರೇಟ್ ಇಳಿಕೆ, ಈವರೆಗೂ ಎಷ್ಟಾಗಿದೆ ಬುಕಿಂಗ್?
ಕಾರಣ 2 : ಸ್ಪೋಟಕ ಸಂಬಂಧ ತುರ್ತು ಸಂದರ್ಭ ಎದುರಾದಾಗ ಹತ್ತಿರದ ವಿಮಾನ ನಿಲ್ದಾಣದಿಂದ ಬಾಂಬ್ ನಿಷ್ಕ್ರಿಯಗೊಳಿಸುವ ಸಿಬ್ಬಂದಿ, ಉಪಕರಣಗಳ ನೆರವು ಪಡೆಯಬಹುದಾಗಿತ್ತು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹುಬ್ಬಳ್ಳಿ – ಧಾರವಾಡ ವಿಮಾನ ನಿಲ್ದಾಣದಿಂದ ನೆರವು ಪಡೆಯಲು ಯೋಜಿಸಲಾಗಿತ್ತು. ಅಲ್ಲದೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ, ಬೆಂಗಳೂರಿನಲ್ಲಿರುವ ಉಪಕರಣ ಬಳಸಿಕೊಳ್ಳುವುದಾಗಿ ಈ ಮೊದಲು ತಿಳಿಸಲಾಗಿತ್ತು. ಹಾಗಾಗಿ ಬಿಟಿಸಿಪಿ ನಿರಾಕ್ಷೇಪಣ ಪತ್ರ ನೀಡಿತ್ತು.
ಇದನ್ನೂ ಓದಿ – ಶಿವಮೊಗ್ಗ ದೂರದರ್ಶನದ ಟವರ್ ಮೇಲೆ ಸ್ಥಾಪನೆಯಾಗಲಿದೆ ಮತ್ತೊಂದು ಟ್ರಾನ್ಸ್ಮೀಟರ್, ಇದರ ಉಪಯೋಗವೇನು?
ಕಾರಣ 3 : ಕೇಂದ್ರ ಸರ್ಕಾರ ಈ ನಿಯಮದಲ್ಲಿ ಕೆಲವು ಬದಲಾವಣೆ ಮಾಡಿದೆ. ತುರ್ತು ಸಂದರ್ಭ ವಿಮಾನ ನಿಲ್ದಾಣದಲ್ಲಿಯೆ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ಉಪಕರಣಗಳು ಇರಬೇಕು ಎಂದು ಸೂಚಿಸಿದೆ. ಈ ಹಿನ್ನೆಲೆ ಅಗತ್ಯ ವ್ಯವಸ್ಥೆ ಮಾಡಲು ಆ.20ರವರೆಗೆ ಕಾಲಮಿತಿ ಕೇಳಲಾಗಿದೆ. ಈ ಹಿನ್ನೆಲೆ ವಿಮಾನ ಹಾರಾಟ ಆ.31ಕ್ಕೆ ಮುಂದೂಡಿಕೆಯಾಗಿದೆ.