ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಅಕ್ಟೋಬರ್ 2021
ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ವಾಟ್ಸಪ್ ಮೂಲಕ ಕರೆ ಮಾಡಿದ ದುಷ್ಕರ್ಮಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದಿದ್ದರೆ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ.
ಶಾದ್ ನಗರದ ಉದ್ಯಮಿಯ ಮನೆ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಅಕ್ಟೋಬರ್ 25ರ ರಾತ್ರಿ ಶಾದ್ ನಗರದಲ್ಲಿರುವ ಉದ್ಯಮಿಯ ಮನೆ ಮೇಲೆ ಯುವಕರ ಗುಂಪೊಂದು ಕಲ್ಲು ತೂರಿದೆ. ಘಟನೆ ನಡೆದು ಕೆಲವೇ ನಿಮಿಷದಲ್ಲಿ ಉದ್ಯಮಿಗೆ ವಾಟ್ಸಪ್ ಕರೆ ಬಂದಿದೆ.
ಕರೆ ಮಾಡಿದ ವ್ಯಕ್ತಿ ತನ್ನನ್ನು ಬಚ್ಚನ್ ಎಂದು ಪರಿಚಿಯಿಸಿಕೊಂಡಿದ್ದಾನೆ. ಕೂಡಲೆ ಐದು ಲಕ್ಷ ರೂ. ಕೊಡಬೇಕು. ಇಲ್ಲವಾದಲ್ಲಿ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಅಲ್ಲದೆ ಕುಟುಂಬದವರನ್ನು ಕೊಲ್ಲುವುದಾಗಿ ಹೆದರಿಸಿದ್ದಾನೆ.
‘ಮಕ್ಕಳ ಮೇಲೆ ಗುಂಡು ಹಾರಿಸುತ್ತೇನೆ’
ಉದ್ಯಮಿಗೆ ಬೆದರಿಕೆ ಕರೆ ಬಂದಿದ್ದು ಇದೆ ಮೊದಲಲ್ಲ. ಸೆ.16ರಂದು ಕರೆ ಮಾಡಿದ್ದ ದುಷ್ಕರ್ಮಿ ಮೂರು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ‘ನಿನ್ನ ಮಕ್ಕಳ ಮೇಲೆ ಗುಂಡು ಹಾರಿಸುತ್ತೇನೆ’ ಎಂದು ಬೆದರಿಕೆ ಒಡ್ಡಿದ್ದ. ಆದರೆ ಉದ್ಯಮಿ ಇದನ್ನು ಉಪೇಕ್ಷಿಸಿದ್ದರು. ಆ ಬಳಿಕ ಹಲವು ಭಾರಿ ವಾಟ್ಸಪ್ ಕರೆಗಳು ಬಂದಿವೆ. ಉದ್ಯಮಿಯು ಕರೆಗಳನ್ನು ಸ್ವೀಕರಿಸಿರಲಿಲ್ಲ.
ಒಮ್ಮೆ ವಾಟ್ಸಪ್ ಮೂಲಕ ವಾಯ್ಸ್ ಮೆಸೇಜ್ ಕಳುಹಿಸಿ ಜೀವ ಬೆದರಿಕೆ ಒಡ್ಡಲಾಗಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ನಡೆಸುತ್ತಿದ್ದಾರೆ.