
ಸಾಗರ: ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ವಾಂತಿ ಮತ್ತು ಭೇದಿಗೆ ಪ್ರಕರಣ ಹೆಚ್ಚಾಗಿದೆ. ಈ ಮಧ್ಯೆ ಭಾಗ್ಯಮಂದಿರ ಕಾಲನಿಯ ಮಹಿಳೆ (Woman) ಮೃತಪಟ್ಟಿದ್ದಾರೆ.
ಇದನ್ನೂ ಓದಿ – ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?
ಕಾರ್ಗಲ್ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ರಾಜು ಅವರ ತಾಯಿ ಜಯಲಕ್ಷ್ಮಿ (65) ಮೃತ ಮಹಿಳೆ. ಇವರು ಬುಧವಾರ ಜ್ವರ, ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ನೂರಕ್ಕು ಹೆಚ್ಚು ಜನ ಅಸ್ವಸ್ಥ
ಕಾರ್ಗಲ್, ಜೋಗ, ಲಿಂಗನಮಕ್ಕಿ, ಅರಳಗೋಡು, ಹೆನ್ನಿ, ಇಡುವಾಣಿ ಗ್ರಾಮಗಳಲ್ಲಿ ನಾಲೈದು ದಿನಗಳಿಂದ ನಿವಾಸಿಗಳಲ್ಲಿ ಹೊಟ್ಟೆನೋವು, ವಾಂತಿ, ಭೇದಿ, ತಲೆನೋವು, ಜ್ವರ ಕಾಣಿಸಿ ಕೊಂಡಿತ್ತು. ಅಸ್ವಸ್ಥಗೊಂಡಿದ್ದ ಕಾರ್ಗಲ್ನ ಸರ್ಕಾರಿ ಶಾಲೆಯ 15ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ಬುಧವಾರ ಕೆಪಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾರ್ಗಲ್ ಪಟ್ಟಣದಲ್ಲಿಯು ವಾಂತಿ ಮತ್ತು ಭೇದಿಗೆ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳು ಹಾಗೂ ಹಿರಿಯರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಎಲ್ಲರು ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಾತ್ರೆಗಳಲ್ಲಿ ತಿಂಡಿ, ತಿನಿಸು ಬಗ್ಗೆ ಎಚ್ಚರ
ಇನ್ನು, ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಲ್.ನಾಗರಾಜ್ ನಾಯ್ಕ ಅವರು ಕಾರ್ಗಲ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆಗೆ ಚರ್ಚಿಸಿದರು. ‘ಶರಾವತಿ ಕೊಳ್ಳದ ನಿವಾಸಿಗಳು ನೀರನ್ನು ಕಾಯಿಸಿ ಕುಡಿಯಬೇಕು. ಜಾತ್ರೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೆರೆದಿಟ್ಟ ತಿಂಡಿ- ತಿನಿಸುಗಳನ್ನು ತಿನ್ನಬಾರದು’ ಎಂದು ಸಲಹೆ ನೀಡಿದರು.

ಜಾತ್ರೆಯ ವೆಜ್ ರೋಲ್ ಬಗ್ಗೆ ಶಂಕೆ
ಕಳೆದ ಮೂರು ದಿನದ ಹಿಂದೆ ನಡೆದ ಚೌಡೇಶ್ವರಿ ಜಾತ್ರೆಯಲ್ಲಿ ಐಸ್ ಕ್ರೀಂ ಹಾಗೂ ಆಲೂ ವೆಜ್ ರೋಲ್ ತಿಂದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ಜಿಲ್ಲಾ ಆರೋಗ್ಯ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವೈದ್ಯಾಧಿಕಾರಿಗಳು ಕುಡಿಯುವ ನೀರು ಹಾಗೂ ಆಹಾರದ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಿದ್ದಾರೆ.


About The Editor
ನಿತಿನ್ ಆರ್.ಕೈದೊಟ್ಲು






