ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ನವೆಂಬರ್ 2021
ಸಂಗೀತ ನಿರ್ದೇಶಕ ಡಾ. ಹಂಸಲೇಖ ಅವರ ಹೇಳಿಕೆ ಬೆಂಬಲಿಸಿ ಮತ್ತು ಬ್ರಾಹ್ಮಣ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಹಂಸಲೇಖ ಅವರು ಕಾರ್ಯಕ್ರಮವೊಂದರಲ್ಲಿ, ದಲಿತರ ಮನೆಗೆ ಬಲಿತರು ಬಂದು ಅಸ್ಪೃಶ್ಯತೆ ಹೋಗಲಾಡಿಸುತ್ತೇವೆ ಎಂಬುದು ಬೂಟಾಟಿಕೆ. ಬಲಿತರ ಮನೆಗೆ ದಲಿತರನ್ನು ಕರೆತಂದು ಅವರಿಗೆ ಊಟ ಬಡಿಸಿ ಅವರ ತಟ್ಟೆ ಲೋಟ ತೊಳೆದು ತಮ್ಮ ತಪ್ಪು ತಿದ್ದಿಕೊಳ್ಳಬೇಕು ಎಂದು ಮಾತನಾಡಿದ್ದರು. ಇದು ಮನಸ್ಸಿಗೆ ಘಾಸಿ ಮಾಡಿದೆ ಎಂದು ಆರೋಪಿಸಿ ಕೆಲವು ಮನುವಾದಿಗಳು, ಹಂಸಲೇಖ ಅವರು ಕ್ಷಮೆ ಕೋರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ಇದು ಅತ್ಯಂತ ಖಂಡನೀಯ ಎಂದರು.
ಅಂಬೇಡ್ಕರ್ ಕೊಟ್ಟ ಸಂವಿಧಾನ ನಮ್ಮನ್ನು ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರಗೆ ತಂದಿದೆ. ನಮ್ಮ ಪ್ರಜಾಪ್ರಭುತ್ವ ಧರ್ಮಾಕ್ರಸಿ ಆಗುತ್ತದೆ ಎನ್ನುವ ಆತಂಕ ಜನಸಾಮಾನ್ಯರಿಗಿದೆ. ಹಾಗೇನಾದರೂ ಆದರೆ ನಾವು ಮತ್ತೆ ಹಿಂದಿನ ಕಾಲಕ್ಕೆ ಹೋಗುವಂತಾಗುತ್ತದೆ. ಹಾಗಾಗಿ ಪ್ರಜಾಪ್ರಭುತ್ವ ಉಳಿಸಲು ನಾವು ಎಚ್ಚರದ ಹೆಜ್ಜೆಯನ್ನಿಡಬೇಕಾಗಿದೆ ಎಂದರು.
ಹಂಸಲೇಖ ಅವರ ವಿರುದ್ದ ಹಾಕಿರುವ ಸುಳ್ಳು ಪ್ರಕರಣ ವಜಾಗೊಳಿಸಿ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಡಿಎಸ್ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಶಿವಬಸಪ್ಪ, ಎ.ಅರ್ಜುನ್, ಎಂ.ಏಳುಕೋಟಿ, ರಾಘವೇಂದ್ರ ಜೋಗಿಹಳ್ಳಿ, ಅತ್ತಿಗುಂದ ಕರಿಯಪ್ಪ, ಎಂ. ರವಿ ಹರಿಗೆ, ಎಂ. ರಮೇಶ್ ಚಿಕ್ಕಮರಡಿ ಸೇರಿದಂತೆ ಹಲವರು ಇದ್ದರು.