SHIVAMOGGA LIVE NEWS | SUICIDE | 10 ಮೇ 2022
ತನ್ನನ್ನು ಪ್ರೀತಿಸು ಎಂದು ಬಲವಂತ ಮಾಡುತ್ತಿದ್ದ ಯುವಕನೋರ್ವನ ಕಿರುಕುಳಕ್ಕೆ ಬೇಸತ್ತು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವಸವೆ ಗ್ರಾಮದ ಕುಂಟಿಗೆ ನಿವಾಸಿ ವಿದ್ಯಾಶ್ರೀ (21) ಮೃತ ಯುವತಿ. ಏ.19ರಂದು ವಿದ್ಯಾಶ್ರೀ ಮನೆಯಲ್ಲಿ ಕೀಟನಾಶಕ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಸ್ವಸ್ಥಗೊಂಡಿದ್ದ ಆಕೆಯನ್ನು ಕುಟುಂಬದವರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಬಳಿಕ ಆಕೆಯನ್ನು ವಿಚಾರಿಸಿದಾಗ ಅದೇ ಊರಿನ ಶಶಾಂಕ ಎಂಬಾತ ತನ್ನನ್ನು ಪ್ರೀತಿ ಮಾಡುವಂತೆ ಬಲವಂತ ಮಾಡುತ್ತಿದ್ದ. ಪ್ರತಿದಿನ ಕಾಲೇಜಿಗೆ ಹೋಗಿ ಬರುವಾಗ ಹಿಂಬಾಲಿಸುತ್ತಿದ್ದ. ತನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ. ಇದರಿಂದ ಮನನೊಂದು ವಿಷ ಸೇವನೆ ಮಾಡಿರುವುದಾಗಿ ತಿಳಿಸಿದ್ದಳು.
ಈ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾಶ್ರೀ ಭಾನುವಾರ ಮೃತಪಟ್ಟಿದ್ದಾಳೆ. ಮೃತಳ ಸಹೋದರ ಇಲ್ಲಿನ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಆರೋಪಿ ಶಶಾಂಕ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತಳು ಇಲ್ಲಿನ ಕೊಡಚಾದ್ರಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು.
ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ – ನಡುರಾತ್ರಿ ಮುಸುಕುಧಾರಿಗಳಿಂದ ಶಿವಮೊಗ್ಗದಲ್ಲಿ ದುಷ್ಕೃತ್ಯ, ಸಿಸಿಟಿವಿಯಲ್ಲಿ ದೃಶ್ಯ ಸೆರೆ