ಶಿವಮೊಗ್ಗ: ವಿನೋಬನಗರದಲ್ಲಿ ಮಹಿಳೆಯ ಸರಗಳ್ಳತನ ಮಾಡಿದ್ದ ಅಂತರರಾಜ್ಯ ದರೋಡೆಕೋರರ ಜಾಲವನ್ನು (Gang) ವಿನೋಬನಗರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಬೆಂಗಳೂರು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ₹25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ.
ತಮಿಳುನಾಡುರ ರಾಜ್ಯದ ಕೊಯಮತ್ತೂರಿನ ಅರಸು ಅಲಿಯಾಸ್ ವಲ್ಲರಸು (25), ಸೇಲಂನ ಕೇಶವನ್ (43), ಅತ್ತಿಬೆಲೆಯ ಸತೀಶ್ ಕುಮಾರ್ (40) ಹಾಗೂ ಬೆಂಗಳೂರಿನ ಗೋರಿ ಪಾಳ್ಯದ ಇಬ್ರಾಹಿಂ ಪಾಶಾ ಬಂಧಿತ ಆರೋಪಿಗಳು.
ಮಹಿಳೆಯನ್ನು ತಳ್ಳಿ ಸರ ಕಿತ್ತೊಯ್ದಿದ್ದರು
ಕಳೆದ ನವೆಂಬರ್ 18ರಂದು ವಿನೋಬನಗರದ 16ನೇ ಕ್ರಾಸ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ತಳ್ಳಿ, ಅವರ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಆರೋಪಿಗಳು ಬೈಕ್ನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ ಶಿವಮೊಗ್ಗದ ವಿನೋಬನಗರದ ಎರಡು ಪ್ರಕರಣಗಳು ಹಾಗೂ ಮೈಸೂರಿನ ಪಿರಿಯಾಪಟ್ಟಣದ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 170 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್, 19 ಅಕೌಂಟ್, 25 ATM ಕಾರ್ಡ್, ₹55 ಕೋಟಿ ನಷ್ಟ, ಏನಿದು ಕೇಸ್?
ಇನ್ಸ್ಪೆಕ್ಟರ್ ಸಂತೋಷಕುಮಾರ್ ಡಿ.ಕೆ ಉಸ್ತುವಾರಿಯಲ್ಲಿ ನಡೆದ ಕಾರ್ಯಾಚರಣೆ ನಡೆಸಲಾಯಿತು. ಪಿಎಸ್ಐ ತಿರುಮಲೇಶ್ ಹಾಗೂ ಸಿಬ್ಬಂದಿ ರಾಜು.ಕೆ.ಆರ್, ಚಂದ್ರಾನಾಯ್ಕ.ಬಿ, ಮಲ್ಲಪ್ಪ.ಎಸ್.ಜಿ, ಅರುಣಕುಮಾರ್.ಎನ್.ಕೆ, ಮನುಶಂಕರ ಪಾಲ್ಗೊಂಡಿದ್ದರು.








