ಶಿವಮೊಗ್ಗ: ಆಯನೂರು ಸಮುದಾಯ ಆರೋಗ್ಯ ಕೇಂದ್ರದ (Health Centre) ವೈದ್ಯರ ಕೊರತೆ ನೀಗಿಸಲು ಮತ್ತು ಆಸ್ಪತ್ರೆಯ ವಿಲೀನ ಖಂಡಿಸಿ ಏಪ್ರಿಲ್ 22ರ ಬೆಳಗ್ಗೆ 10 ಗಂಟೆಗೆ ಆಯನೂರಿನಲ್ಲಿ ಪ್ರತಿಭಟನಾ ಸಭೆ ಹಾಗೂ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿಯ ಪ್ರಮುಖ ಭರತ್ ಗೌಡ ತಿಳಿಸಿದರು.
ಇದನ್ನೂ ಓದಿ : ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭರತ್ ಗೌಡ, ‘ಸರ್ಕಾರದ ಗಮನ ಸೆಳೆಯಲು ಆಯನೂರಿನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಿಂದ ಸಮುದಾಯ ಆರೋಗ್ಯ ಕೇಂದ್ರದವರೆಗೆ ಪಾದಯಾತ್ರೆ ನಡೆಸಲಾಗುತ್ತದೆ’ ಎಂದು ತಿಳಿಸಿದರು.
‘ಸುತ್ತಮುತ್ತಲಿನ ನೂರಾರು ಗ್ರಾಮಗಳು ಮತ್ತು ವಿವಿಧ ತಾಲೂಕಿನ ಜನರಿಗೆ ಸಮುದಾಯ ಆರೋಗ್ಯ ಕೇಂದ್ರ ಅನುಕೂಲವಾಗಿದೆ. ರೈತರು, ಕೂಲಿ ಕಾರ್ಮಿಕರು ಹಾಗೂ ಗರ್ಭಿಣಿಯರಿಗೆ ಈ ಕೇಂದ್ರ ಅತಿ ಅವಶ್ಯಕವಾಗಿದೆ. ಇದೇ ಕಾರಣಕ್ಕೆ ಈ ಹಿಂದೆ ಆಯನೂರಿನ ಸಮುದಾಯ ಆರೋಗ್ಯ ಕೆಂದ್ರಕ್ಕೆ ರಾಜ್ಯದ ಅತ್ಯುತ್ತಮ ಆಸ್ಪತ್ರೆ ಎಂಬ ಪ್ರಶಸ್ತಿ ಲಭಿಸಿತ್ತು’ ಎಂದು ತಿಳಿಸಿದರು.
‘ವಿಲೀನಕ್ಕೆ ಜನರ ವಿರೋಧವಿದೆʼ
ಹೋರಾಟ ಸಮಿತಿಯ ಕಿರಣ್ ಮಾತನಾಡಿ, ‘ಆಯನೂರಿನ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯೊಂದಿಗೆ ವಿಲೀನಗೊಳಿಸುವ ಸರ್ಕಾರದ ಪ್ರಸ್ತಾವನೆಗೆ ಸ್ಥಳೀಯವಾಗಿ ತೀವ್ರ ವಿರೋಧ ವ್ಯಕ್ತವಾಗಿದೆ’ ಎಂದರು.

‘2009ರಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿದ ಈ ಆಸ್ಪತ್ರೆಯು ಹಂತ ಹಂತವಾಗಿ ಅಭಿವೃದ್ಧಿ ಹೊಂದಿದೆ. ಸುತ್ತಮುತ್ತಲ ನೂರಾರು ಗ್ರಾಮಗಳ ಜನರಿಗೆ ಆಸರೆಯಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರವೇ ಇಲ್ಲಿ ಇದುವರೆಗೆ ಸುಮಾರು 25 ಸಾವಿರ ಗರ್ಭಿಣಿಯರು ಮತ್ತು ಮಕ್ಕಳು ಚಿಕಿತ್ಸೆ ಪಡೆದಿದ್ದಾರೆ. ಇಷ್ಟೊಂದು ಜನದಟ್ಟಣೆ ಇರುವ ಆಸ್ಪತ್ರೆಯನ್ನು ವಿಲೀನಗೊಳಿಸುವ ನಿರ್ಧಾರ ಸಮಂಜಸವಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಶಿವಮೊಗ್ಗದ ನೆಹರು ರಸ್ತೆಯಲ್ಲಿ ಮೆರವಣಿಗೆ, ಶಿವಪ್ಪನಾಯಕ ಪ್ರತಮೆ ಮುಂಭಾಗ ಪ್ರತಿಭಟನೆ
‘ಆಯನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಜ್ಞ ವೈದ್ಯರನ್ನು ಬೇರೆಡೆಗೆ ವರ್ಗಾಯಿಸಲಾಯಿತು. ಇದರಿಂದ ರೋಗಿಗಳ ಸಂಖ್ಯೆ ಕಡಿಮೆಯಾಯಿತು. ಈಗ ಇದೇ ಅಂಕಿಅಂಶವನ್ನು ಮುಂದಿಟ್ಟುಕೊಂಡು ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯೊಂದಿಗೆ ವಿಲೀನಗೊಳಿಸಲು ಯೋಜಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಬಡ ರೋಗಿಗಳಿಗೆ ಚಿಕಿತ್ಸೆ ಮರೀಚಿಕೆಯಾಗಲಿದೆʼ ಎಂದು ಬೇಸರ ವ್ಯಕ್ತಪಡಿಸಿದರು.

About The Editor
ನಿತಿನ್ ಆರ್.ಕೈದೊಟ್ಲು









