SHIVAMOGGA LIVE NEWS | 26 ಮಾರ್ಚ್ 2022
ಗುಂಡು ತಗುಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಕಾಂತರಾಜು ಸಾವನ್ನಪ್ಪಿದ್ದಾರೆ. ಶಿಕಾರಿಗೆ ತೆರಳಿದ್ದಾಗ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಮೇಲಿನಕೊಪ್ಪ ಕಾಂತರಾಜು (44) ಅವರಿಗೆ ಇವತ್ತು ಮಧ್ಯಾಹ್ನ ಗುಂಡು ತಗುಲಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹೇಗಾಯ್ತು ಘಟನೆ?
ಬಂದೂಕಿನಿಂದ ಹಾರಿದ ಗುಂಡು ತಗುಲಿ ಕಾಂತರಾಜು ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅಂಬುತೀರ್ಥ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ನೋವಿನಿಂದ ಕೂಗುತ್ತಿದ್ದರು. ದಾರಿಯಲ್ಲಿ ಹೋಗುತ್ತಿದ್ದವರು ಕಾಂತರಾಜು ಅವರನ್ನು ಗಮನಿಸಿದ್ದಾರೆ. ಕೂಡಲೆ ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಮಾರ್ಗ ಮಧ್ಯೆ ಕಾಂತರಾಜ್ ಅವರು ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು
ಮೇಲಿನಕೊಪ್ಪ ಕಾಂತರಾಜು ಅವರು ನೊಣಬೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. 2015 ರಿಂದ 18ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕಾಂತರಾಜು ಅವರು ಅವಿವಾಹಿತರಾಗಿದ್ದು, ತಂದೆ ಮತ್ತು ತಮ್ಮನ ಜೊತೆಗೆ ವಾಸವಾಗಿದ್ದರು.
ಆಸ್ಪತ್ರೆಗೆ ಗೃಹ ಸಚಿವರ ದೌಡು
ಇನ್ನು, ವಿಚಾರ ತಿಳಿಯುತ್ತಿದ್ದ ಹಾಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆಸ್ಪತ್ರೆಗೆ ದೌಡಾಯಿಸಿದರು. ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ, ಅಂತಿಮ ದರ್ಶನ ಪಡೆದರು. ಅಧಿಕಾರಿಗಳು, ಬಿಜೆಪಿ ಮುಖಂಡರ ಜೊತೆಗೆ ಸಚಿವ ಆರಗ ಜ್ಞಾನೇಂದ್ರ ಅವರು ಚರ್ಚೆ ನಡೆಸಿದರು.
ಚರ್ಚೆಗೆ ಕಾರಣವಾಯ್ತು ಫೈರಿಂಗ್
ಬಿಜೆಪಿ ಮುಖಂಡ ಕಾಂತರಾಜು ಅವರು ಗುಂಡೇಟಿಗೆ ಬಲಿಯಾಗಿರುವುದು ತೀರ್ಥಹಳ್ಳಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಶಿಕಾರಿಗೆ ಹೋಗಿದ್ದಾಗ ಘಟನೆ ಸಂಭವಿಸಿದೆಯೇ, ಆಕಸ್ಮಿಕವಾಗಿ ಹಾರಿದ ಗುಂಡು ಕಾಂತರಾಜು ಅವರಿಗೆ ತಗುಲಿತೆ, ದುರುದ್ದೇಶಪೂರ್ವಕವಾಗಿಯೇ ಯಾರಾದರೂ ಗುಂಡು ಹಾರಿಸಿದರಾ ಎಂಬ ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200