SHIVAMOGGA LIVE NEWS | 16 AUGUST 2023
SHIMOGA : ಮೂರು ತಿಂಗಳಲ್ಲಿಯೆ ಸರ್ಕಾರದ ವರ್ಚಸ್ಸು ಕಡಿಮೆಯಾಗಿದೆ. ಅನೇಕ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಗ್ಯಾರಂಟಿ (Guarantee Scheme) ಯೋಜನೆಗಳ ಅಬ್ಬರದ ಪ್ರಚಾರದ ಮಧ್ಯೆ ಸರ್ಕಾರ ನಡೆಯುತ್ತಿದೆ. ಈ ಯೋಜನೆಗಳಿಗಾಗಿ ಮತ ನೀಡಿದ್ದ ಜನರು ಈಗ ತಾವು ಯಾಮಾರಿದ್ದೇವೆ ಎಂದು ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವರ್ಚಸ್ಸು ಇಷ್ಟು ಬೇಗ ಕಡಿಮೆಯಾಗಿರುವುದು ಆಶ್ಚರ್ಯ ಉಂಟು ಮಾಡುತ್ತಿದೆ. ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ತನ್ನ ಹಳೆ ಚಾಳಿ ಮುಂದುವರೆಸಿದೆ. ಸಚಿವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ಜನರು ಮನೆ ಮನೆಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನಂತೆ ಈಗಲು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ.
ಚುನಾವಣೆ ಸಂದರ್ಭ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 40 ರಿಂದ 50 ಸಾವಿರ ಕೋಟಿ ರೂ. ಸಾಲ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಆದರೆ 70 ರಿಂದ 80 ಸಾವಿರ ಕೋಟಿ ರೂ. ಸಾಲ ಮಾಡಲಾಗುತ್ತಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕ ಶಿಸ್ತು ಕಳೆದುಕೊಂಡಿದೆ. ಹಾಗಾಗಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ – ‘ಶರಾವತಿ ಸಂತ್ರಸ್ತರ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ, ರೈತರ ಹಿತ ಕಾಯಲು ಕಾನೂನು ಸಮರಕ್ಕು ಸಿದ್ಧ’
ಉಚಿತ ವಿದ್ಯುತ್ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಈಗ ಮಳೆ ಅಭಾವದಿಂದ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ. ಮಳೆ ಇಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಲೋಡ್ಶೆಡ್ಡಿಂಗ್ ಮಾಡಿ ಜನರಿಗೆ ಸಮಸ್ಯೆ ಉಂಟು ಮಾಡಲಾಗುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ತುಂಗಾ ಭದ್ರ ನದಿಯಿಂದ ಶಿಕಾರಿಪುರ ತಾಲೂಕಿಗೆ ಪೈಪ್ಲೈನ್ ಮೂಲಕ ನೀರು ತರುವ ಯೋಜನೆ ರೂಪಿಸಿದ್ದರು. ಆದರೆ ಲೋಡ್ಶೆಡ್ಡಿಂಗ್ನಿಂದಾಗಿ ಪೈಪ್ಲೈನ್ ಮೂಲಕ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.
ಗ್ಯಾರಂಟಿ ಯೋಜನೆಗಳ ಅಬ್ಬರದ ಪ್ರಚಾರದ ಮಧ್ಯೆ ಸರ್ಕಾರ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಈಚೆಗೆ ಗುತ್ತಿಗೆದಾರರೊಬ್ಬರು ಆರೋಪ ಮಾಡಿದ್ದರು. ಈಗ ಅವರು ಹೇಳಿಕೆ ಹಿಂಪಡೆದಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಅನೇಕ ಆರೋಪ ಮಾಡಿದ್ದ ಕೆಂಪಣ್ಣ ಅವರು ಈಗ ಮೌನವಾಗಿದ್ದಾರೆ.