ಶಿವಮೊಗ್ಗ ಲೈವ್.ಕಾಂ | TARIKERE NEWS | 26 ಆಗಸ್ಟ್ 2021
ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದ ಕಾರು ಭದ್ರಾ ನಾಲೆಗೆ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಕಣ್ಮರೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಇನ್ನಿಬ್ಬರು ಪವಾಡ ರೀತಿಯಲ್ಲಿ ಪಾರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕರೆ ತಾಲೂಕು ಎಂ.ಸಿ.ಹಳ್ಳಿ ಬಳಿ ಘಟನೆ ಸಂಭವಿಸಿದೆ. ಬೆಳಗಿನ ಜಾವ ಕಾರು ನಾಲೆಗೆ ಬಿದ್ದಿದೆ. ಇವರು ಭದ್ರಾವತಿ ತಾಲೂಕು ಹಳೆ ಜೇಡಿಕಟ್ಟೆ ವಾಸಿಗಳು ಎಂದು ತಿಳಿದು ಬಂದಿದೆ.
ಹೇಗಾಯ್ತು ಘಟನೆ?
ಬೆಂಗಳೂರಿನಿಂದ ಭದ್ರಾವತಿಗೆ ಮರಳುತ್ತಿದ್ದಾಗ ಎಂ.ಸಿ.ಹಳ್ಳಿ ಬಳಿ ಘಟನೆ ಸಂಭವಿಸಿದೆ. ಮಂಜುನಾಥ್, ಅವರ ತಾಯಿ ಸುನಂದಾ, ಪತ್ನಿ ನೀತಾ, ಮಗ ಧ್ಯಾನ್ ಕಾರಿನಲ್ಲಿದ್ದರು. ಮಂಜುನಾಥ್ ಅವರೆ ಕಾರು ಚಲಾಯಿಸುತ್ತಿದ್ದರು. ಭದ್ರಾ ನಾಲೆ ಬಳಿಗೆ ಬರುತ್ತಿದ್ದಂತೆ ಕಾರು ಏಕಾಏಕಿ ರಸ್ತೆಯಿಂದ ನಾಲೆ ಕಡೆಗೆ ತಿರುಗಿದ್ದು, ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅದೃಷ್ಟವಶಾತ್ ನೀತಾ ಮತ್ತು ಅವರ ಮಗ ಧ್ಯಾನ್ ಪಾರಾಗಿದ್ದಾರೆ.
ಬೆಳಗ್ಗೆಯಿಂದ ಶೋಧ ಕಾರ್ಯ
ಮಂಜುನಾಥ್ ಮತ್ತು ಅವರ ತಾಯಿ ಸುನಂದಾ ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ನಾಲೆಯಲ್ಲಿ ಶೋಧ ಮುಂದುವರೆಸಿದ್ದಾರೆ. ಆದರೆ ಈವರೆಗೂ ಸುಳಿವು ಪತ್ತೆಯಾಗಿಲ್ಲ. ಭದ್ರಾ ನಾಲೆಯಲ್ಲಿ ನೀರು ಹರಿಸುತ್ತಿರುವುದರಿಂದ ಶೋಧ ಕಾರ್ಯಕ್ಕೆ ತೊಡಗಾಗುತ್ತಿದೆ.
ಆಡಿಯೋದಲ್ಲಿ ಆತ್ಮಹತ್ಯೆಯ ಸುಳಿವು
ಕಾರು ಚಲಾಯಿಸುತ್ತಿದ್ದ ಮಂಜುನಾಥ್ ಅವರು ಆತ್ಮಹತ್ಯೆಗೆ ಯೋಜಿಸಿದ್ದರು ಎಂದು ಹೇಳಲಾಗುತ್ತಿದೆ. ಸಂಬಂಧಿಕರಿಗೆ ಮಂಜುನಾಥ್ ಅವರು ನಡುರಾತ್ರಿ ಕರೆ ಮಾಡಿದ್ದರು ಎಂದು ತಿಳಿದ ಬಂದಿದೆ. ಮಂಜುನಾಥ್ ಅವರದ್ದು ಎನ್ನಲಾಗುತ್ತಿರುವ ಆಡಿಯೋ ವೈರಲ್ ಆಗಿದೆ. ಅದರಲ್ಲಿ ತಾವು ಇನ್ನು ಹತ್ತು ನಿಮಿಷದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಕುಟುಂಬದರು ಕೂಡ ಕೊನೆಯಾಗಲಿದ್ದಾರೆ. ಜೊತೆಯಲ್ಲಿದ್ದವರು ಮೋಸ ಮಾಡಿದ್ದೇ ಇದಕ್ಕೆ ಕಾರಣ ಎಂದು ಮಂಜುನಾಥ್ ಅವರು ಹೇಳಿದ್ದರು. ಈ ನಿರ್ಧಾರ ಕೈಬಿಡುವಂತೆ ಸಂಬಂಧಿಕರು ಮನವಿ ಮಾಡಿದರೂ, ಮಂಜುನಾಥ್ ಅವರು ಆತ್ಮಹತ್ಯೆ ನಿರ್ಧಾರ ಕೈಬಿಡುವುದಿಲ್ಲ ಎಂದು ಹೇಳಿದ್ದರು.
ಇಡೀ ಕುಟುಂಬದ ಕಥೆಯೇ ಮುಗಿಯುತಿತ್ತು
ತರೀಕೆರೆಯ ಎಂ.ಸಿ.ಹಳ್ಳಿ ಬಳಿ ಭದ್ರಾ ನಾಲೆ ಬಳಿಗೆ ಬರುತ್ತಿದ್ದಂತೆ ಮಂಜುನಾಥ್ ಅವರು ಕಾರನ್ನು ನಾಲೆ ಕಡೆಗೆ ತಿರುಗಿಸಿರುವ ಶಂಕೆ ಇದೆ. ಇಡೀ ಕುಟುಂಬದ ಕಥೆಯೇ ಕೊನೆಯಾಗುವ ಸಾಧ್ಯತೆ ಇತ್ತು. ಆದರೆ ಕಾರು ನಾಲೆಗೆ ಬೀಳುತ್ತಿದ್ದಂತೆ ನೀತಾ ಅವರು ತಮ್ಮ ಮಗ ಧ್ಯಾನ್ ಜೊತೆಗೆ ಈಜಿ ನಾಲೆಯಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತರೀಕೆರೆ ಠಾಣೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200