ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜೂನ್ 2020
ಕೊರೊನಾ ಸೋಂಕು ಹಿನ್ನೆಲೆ ಸೀಲ್ ಡೌನ್ ಆಗಿದ್ದ ಪ್ರದೇಶದ ನಿವಾಸಿಗಳು ಪಕ್ಕದ ಹಳ್ಳಿಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಭವಿಸಿದ್ದು ಎಲ್ಲಿ?
ಶಿವಮೊಗ್ಗ ತಾಲೂಕು ಹಸೂಡಿ ಸಮೀಪದ ಹಕ್ಕಿ ಪಿಕ್ಕಿ ಕ್ಯಾಂಪ್ನವರು ಚಿಕ್ಕಮರಡಿ ಗ್ರಾಮದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ. ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಪುಡಿಪುಡಿಯಾಗಿದೆ.
ಘಟನೆಗೆ ಕಾರಣ ಏನು?
ಪಂಜಾಬ್ನಿಂದ ಬಂದಿದ್ದ ಹಸೂಡಿ ಸಮೀಪದ ಹಕ್ಕಿ ಪಿಕ್ಕಿ ಕ್ಯಾಂಪ್ನ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ, ಆ ಪ್ರದೇಶ ಸೀಲ್ ಡೌನ್ ಮಾಡಲಾಗಿತ್ತು. ಆದರೆ, ಕ್ಯಾಂಪ್ ನಿವಾಸಿಗಳು ಪಕ್ಕದ ಚಿಕ್ಕಮರಡಿ ಗ್ರಾಮದಲ್ಲಿ ಓಡಾಡುತ್ತಿದ್ದರೆಂದು ಆರೋಪಿಸಲಾಗಿದೆ.
ಈ ರೀತಿ ಓಡಾಡುತ್ತಿರುವುದನ್ನು ಚಿಕ್ಕಮರಡಿ ಗ್ರಾಮಸ್ಥರು ಬರಬಾರದೆಂದು ಖಂಡಿಸಿದ್ದಾರೆ. ಈ ಕಾರಣಕ್ಕಾಗಿ ಆಕ್ರೋಶಗೊಂಡು ಕ್ಯಾಂಪ್ನ ನೂರಕ್ಕೂ ಹೆಚ್ಚು ಜನ ಕಲ್ಲು ತೂರಾಟ ಮಾಡಿದ್ದಾರೆಂದು ಹೇಳಲಾಗಿದೆ.
ಹತ್ತಕ್ಕೂ ಹೆಚ್ಚು ಜನರಿಗೆ ಗಾಯ
ಘಟನೆಯಲ್ಲಿ ಹತ್ತಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]