ಶಿವಮೊಗ್ಗ ಲೈವ್.ಕಾಂ | SAGARA NEWS | 16 ಅಕ್ಟೋಬರ್ 2020
ಸಿಗಂದೂರು ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕಚೇರಿಯ ಪೀಠೋಪಕರಣಗಳು ಹಾನಿ ಮಾಡಲಾಗಿದೆ. ದೇಗುಲದ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವಿನ ಶೀತಲ ಸಮರ, ಮತ್ತೊಂದು ಸ್ವರೂಪ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಬೆಳಗ್ಗೆ ಮೌನವ್ರತ ಆರಂಭಿಸಿದ್ದ ಅರ್ಚಕ
ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರು ದೇವಸ್ಥಾನದ ಗರ್ಭಗುಡಿಯ ಮುಂದೆ ಮೌನಾಚರಣೆ ಆರಂಭಿಸಿದ್ದರು. ನವರಾತ್ರಿಗು ಮೊದಲು ಚಂಡಿಕಾ ಹೋಮ ನಡೆಸಬೇಕು. ರಾಮಪ್ಪ ಅವರು ಅದಕ್ಕೆ ಅವಕಾಶ ನೀಡಿಲ್ಲ ಎಂದು ಅರ್ಚಕ ಶೇಷಗಿರಿ ಭಟ್ ಆರೋಪಿಸಿದ್ದರು. ಇದೆ ಕಾರಣಕ್ಕೆ ತಾಯಿಗೆ ಕೋರಿಗೆ ಮಾಡಿಕೊಂಡು ಮೌನ ವ್ರತ ಮಾಡುತ್ತಿರುವುದಾಗಿ ವಿಡಿಯೋ ಬಿಡುಗಡೆ ಮಾಡಿ ತಿಳಿಸಿದ್ದರು.
ದಿಢೀರ್ ಶುರುವಾಯ್ತು ಗಲಾಟೆ
ಶೇಷಗಿರಿ ಭಟ್ ಅವರು ತಮ್ಮ ಕುಟುಂಬ ಸಹಿತ, ದೇವಸ್ಥಾನದ ಗರ್ಭಗುಡಿಯೊಳಗೆ ಕುಟುಂಬ ಮೌನವ್ರತ ಆರಂಭಿಸಿದ್ದರು. ಈ ವೇಳೆ ದೇವಸ್ಥಾನಕ್ಕೆ ಬಂದ ಕೆಲವು ಭಕ್ತರು, ಅರ್ಚಕರು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ಮೌನವ್ರತ ಬಿಟ್ಟು ಹೊರ ಬರುವಂತೆ ಒತ್ತಾಯಿಸಿದರು. ಈ ವೇಳೆ ಅರ್ಚಕರ ಕಡೆಯವರು ಮತ್ತು ಭಕ್ತರ ನಡುವೆ ನೂಕಾಟ, ತಳ್ಳಾಟವಾಗಿದೆ ಎಂದು ತಿಳಿದು ಬಂದಿದೆ.
ದೇಗುಲ ಕಚೇರಿ ಪೀಸ್ ಪೀಸ್
ಗಲಾಟೆ ವೇಳೆ ಸಿಗಂದೂರು ದೇವಸ್ಥಾನದ ಕಚೇರಿಯಲ್ಲಿ ಪೀಠೋಪಕರಣಗಳು ಹಾನಿಯಾಗಿದೆ. ಕೆಲವು ವಸ್ತುಗಳು ಮುರಿದು ಬಿದ್ದಿವೆ. ಗಲಾಟೆಯಿಂದಾಗಿ ದೇವಸ್ಥಾನದ ಆವರಣದಲ್ಲಿ ಗೊಂದಲ ನಿರ್ಮಾಣವಾಗಿತ್ತು.
ಪೊಲೀಸರ ಮಧ್ಯ ಪ್ರವೇಶ
ಗಲಾಟೆಯಾಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಎರಡು ಗುಂಪುಗಳನ್ನು ಸಮಾಧಾನಪಡಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ. ಆದರೆ ಶಕ್ತಿ ಕೇಂದ್ರ ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲಿನ ಈ ಬೆಳವಣಿಗೆಗಳು ಭಕ್ತರಲ್ಲಿ ನೋವುಂಟು ಮಾಡಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]