ಶಿವಮೊಗ್ಗ: ಮದುವೆ ಸಮಾರಂಭದ ವೇಳೆ ಕಲ್ಯಾಣ ಮಂಟಪದ ಎರಡು ಕೊಠಡಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ (gold jewelry) ಕಳ್ಳತನ ಮಾಡಲಾಗಿದೆ. ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್ ಹಾಲ್ನಲ್ಲಿ ಘಟನೆ ನಡೆದಿದೆ.
ಬಾಗಿಲು ಚಿಲಕ ಹಾಕಿ ಹೋಗಿದ್ದರು
ತೇವರ ಚಟ್ನಹಳ್ಳಿ ಗ್ರಾಮದ ನಿವಾಸಿ ಸದಾಶಿವಪ್ಪ ಮತ್ತು ಅವರ ಪರಿಚಯದ ನವೀನ್ ಎಂಬುವವರು ಕುಟುಂಬ ಸಹಿತ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸರ್ಜಿ ಕನ್ವೆನ್ಷನ್ ಹಾಲ್ನ ಪ್ರತ್ಯೇಕ ಕೊಠಡಿಗಳಲ್ಲಿ ಲಗೇಜ್ ಇರಿಸಿದ್ದರು. ಮಧ್ಯಾಹ್ನ ಮದುವೆಯ ವೇದಿಕೆ ಕಾರ್ಯಕ್ರಮಕ್ಕೆ ತೆರಳುವಾಗ ಕೊಠಡಿಗಳಿಗೆ ಚಿಲಕ ಹಾಕಿ ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಶಿವಮೊಗ್ಗ – ಬೆಂಗಳೂರು ವಿಮಾನ ಸೇವೆ ಸ್ಥಗಿತ, ಯಾಕೆ? ಇಲ್ಲಿದೆ ಪ್ರಮುಖ ಪಾಯಿಂಟ್ಸ್
ಚೆಲ್ಲಾಪಿಲ್ಲಿಯಾದ ಬಟ್ಟೆ, ಒಡವೆ ನಾಪತ್ತೆ
ವೇದಿಕೆ ಕಾರ್ಯಕ್ರಮ ಮುಗಿಸಿ ವಾಪಸ್ ಬಂದು ನೋಡಿದಾಗ ಕೊಠಡಿಗಳಲ್ಲಿ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಸದಾಶಿವಪ್ಪ ಅವರ ಬ್ಯಾಗ್ನಿಂದ 10 ಗ್ರಾಂ ಚಿನ್ನದ ಸರ ಮತ್ತು 2 ಗ್ರಾಂ ಲಕ್ಷ್ಮಿ ಪೆಂಡೆಂಟ್ ಕಳುವಾಗಿದೆ.

ನವೀನ್ ಅವರ ಬ್ಯಾಗ್ನಲ್ಲಿದ್ದ 10 ಗ್ರಾಂ ಬೆಂಡೋಲೆ, 3 ಗ್ರಾಂ ಮಾಟೀಲ್ ಮತ್ತು 3 ಗ್ರಾಂ ತೂಕದ ಕಿವಿ ಓಲೆಗಳನ್ನು ಕಳ್ಳರು ದೋಚಿದ್ದಾರೆ. ಒಟ್ಟು 28 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಬ್ಯಾಗ್ನಲ್ಲಿದ್ದ ಒಟ್ಟು ₹2.40 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಒಡವೆಗಳು ಕಳುವಾಗಿದ್ದವು ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
