ಶಿವಮೊಗ್ಗ: ಮನೆಯೊಂದರ ಬಾಗಿಲಿನ ಬೀಗ ಮುರಿದು ನುಗ್ಗಿದ ಕಳ್ಳರು ಸುಮಾರು ₹19.12 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ (Stolen). ವೆಂಕಟೇಶ್ ನಗರದ 4ನೇ ಕ್ರಾಸ್ನಲ್ಲಿರುವ ಪ್ರಶಾಂತ್ ಬಾಬು ಅವರ ಮನೆಯಲ್ಲಿ ಘಟನೆ ಸಂಭವಿಸಿದೆ.
ಬ್ಯೂಟಿ ಪಾರ್ಲರ್ನಿಂದ ಬಂದಾಗ ಆಘಾತ
ಪ್ರಶಾಂತ್ ಬಾಬು ಅವರು ತಮ್ಮ ಟೈಲರಿಂಗ್ ಮಳಿಗೆಗೆ ಕೆಲಸಕ್ಕೆ ತೆರಳಿದ್ದರು. ಅವರ ಪತ್ನಿ ಉಷಾ ಅವರು ಮನೆಗೆ ಬೀಗ ಹಾಕಿಕೊಂಡು ಬ್ಯೂಟಿ ಪಾರ್ಲರ್ಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬಂದಾಗ ಮನೆಯ ಮುಂಬಾಗಿಲು ತೆರೆದಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಲಕ್ಷ ಲಕ್ಷ ಹಣ, ಚಿನ್ನಾಭರಣ ಮಿಸ್ಸಿಂಗ್
ಕಳ್ಳರು ಮನೆಯ ಮುಂಭಾಗಿಲಿಗೆ ಹಾಕಿದ್ದ ಬೀಗವನ್ನು ಆಯುಧದಿಂದ ಮೀಟಿ ಮುರಿದು ಒಳನುಗ್ಗಿದ್ದರು. ಬೆಡ್ರೂಂನ ವಾಡ್ರೋಬ್ ಮತ್ತು ಬೀರುಗಳ ಬಾಗಿಲುಗಳನ್ನು ತೆರೆದು ಬಟ್ಟೆಗಳನ್ನು ಚಲ್ಲಾಪಿಲ್ಲಿಯಾಗಿ ಹಾಕಲಾಗಿತ್ತು. ಬೀರುವಿನಲ್ಲಿದ್ದ ₹4 ಲಕ್ಷ ನಗದು ಹಾಗೂ 126 ಗ್ರಾಂ ತೂಕದ ಚಿನ್ನದ ಚೈನ್ಗಳು, ಬ್ರಾಸ್ಲೆಟ್, ಉಂಗುರಗಳು, ಕಿವಿ ಓಲೆಗಳು ಮತ್ತು ಮೂಗುತಿಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ನ್ಯಾಯಾಲಯದ ಸಿಬ್ಬಂದಿಗೆ ಫೋನಿನಲ್ಲಿ ‘ಮಂಗಳಮ್ಮ’ ಎಂದು ಪರಿಚಯಿಸಿಕೊಂಡು ಬೆದರಿಕೆ, ಏನಿದು ಕೇಸ್?
ಕಳುವಾದ ಒಟ್ಟು ಆಭರಣಗಳ ಮೌಲ್ಯ ₹15,12,000 ಹಾಗೂ ₹4 ಲಕ್ಷ ನಗದು ಸೇರಿದಂತೆ ಒಟ್ಟು ₹19,12,000 ಮೊತ್ತದ ಸ್ವತ್ತು ದೋಚಲಾಗಿದೆ ಎಂದು ಆರೋಪಿಸಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
