SHIVAMOGGA LIVE NEWS | 5 SEPTEMBER 2023
SHIMOGA : ಸುತ್ತೂರು ಮಠದ ಹೆಸರು ದುರ್ಬಳಕೆ ಮಾಡಿಕೊಂಡು ಶಿಕ್ಷಕಿ ಮತ್ತು ನರ್ಸ್ಗೆ ಸಿನಿಮೀಯ ರೀತಿಯಲ್ಲಿ 6 ಲಕ್ಷ ರೂ. ಹಣ ವಂಚಿಸಲಾಗಿದೆ. ದುಪ್ಪಟ್ಟು ಹಣದ (Money Doubling) ಆಸೆಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡ ಮಹಿಳೆಯರು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಸುತ್ತೂರು ಮಠದ ಹೆಸರು ಬಳಕೆ
ಸುತ್ತೂರು ಮಠದಲ್ಲಿ ಮ್ಯಾನೇಜರ್ ಎಂದು ಹೇಳಿಕೊಂಡು ಕುಮಟದ ಶಿಕ್ಷಕಿ ಸುರೇಖಾ ಅವರಿಗೆ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಮಠದಲ್ಲಿ 100 ರೂ. ಮುಖ ಬೆಲೆಯ ಲಕ್ಷಾಂತರ ಮೌಲ್ಯದ ನೋಟುಗಳಿವೆ. ಅವುಗಳನ್ನ 500 ರೂ. ಮುಖಬೆಲೆಯ ನೋಟುಗಳಿಗೆ ಬದಲಾಯಿಸಬೇಕಿದೆ. ಆದ್ದರಿಂದ 500 ರೂ. ಮುಖ ಬೆಲೆಯ ನೋಟುಗಳನ್ನು ತಂದುಕೊಟ್ಟರೆ ಅದರ ಎರಡು ಪಟ್ಟು ಮೌಲ್ಯದ 100 ರೂ. ನೋಟುಗಳನ್ನು ಕೊಡುವುದಾಗಿ ನಂಬಿಸಿದ್ದ.
ಇದನ್ನೂ ಓದಿ – ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ಗದ್ದಲ, ಗೊಂದಲ, ಪೊಲೀಸ್ ಮಧ್ಯಪ್ರವೇಶ, ಆಗಿದ್ದೇನು?
ಮತ್ತೊಬ್ಬ ಮಹಿಳೆಗೆ ಮಾಹಿತಿ
ಸುರೇಖಾ ತನ್ನ ಪರಿಚಿತ ನರ್ಸ್ ಪಲ್ಲವಿ ಎಂಬುವವರಿಗೆ ಈ ವಿಚಾರ ತಿಳಿಸಿದ್ದರು. ಹಾಗಾಗಿ ಇಬ್ಬರು 500 ರೂ. ಮುಖಬೆಲೆಯ 6 ಲಕ್ಷ ರೂ. ಹೊಂದಿಸಿದ್ದರು. ಹಾಗಾಗಿ ಮಹಿಳೆಯರಿಗೆ 12 ಲಕ್ಷ ರೂ. ಹಣ ನೀಡುವುದಾಗಿ ಅಪರಿಚಿತರು ತಿಳಿಸಿದ್ದರು. ಅಲ್ಲದೆ, ಹಣವನ್ನು ಸಾಗರಕ್ಕೆ ತರುವಂತೆ ಅಪರಿಚಿತ ವ್ಯಕ್ತಿ ಸುರೇಖಾ ಅವರಿಗೆ ಸೂಚಿಸಿದ್ದ. ಮಹಿಳೆಯರು ಸಾಗರ ತಲುಪಿದಾಗ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಸುರೇಖಾ ಮತ್ತು ಪಲ್ಲವಿಯನ್ನು ಕುಂಸಿ ಬಳಿ ಜನ ಸಂಚಾರ ಕಡಿಮೆ ಇರುವಲ್ಲಿಗೆ ಕರೆತಂದಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಎರಡು ಕಡೆ ಕೆಲಸ ಖಾಲಿ ಇದೆ, ಒಂದು ಕಡೆ ತಿಂಗಳಿಗೆ 30 ಸಾವಿರ ರೂ.ವರೆಗೆ ಸಂಬಳ
ಮರದ ಪೆಟ್ಟಿಗೆಯಲ್ಲಿ ಕಂತೆ ಕಂತೆ ಹಣ
ಕುಂಸಿ ಸಮೀಪ ಅಪರಿಚಿತರು ತಮ್ಮ ಬಳಿ ಇದ್ದ ಪ್ಲೈವುಡ್ ಬಾಕ್ಸ್ ನೀಡಿದ್ದರು. ಅದರಲ್ಲಿ 100 ರೂ. ಮುಖಬೆಲೆಯ 12 ಲಕ್ಷ ರೂ. ಇದೆ ಎಂದು ಹೇಳಿದರು. ಬಾಕ್ಸ್ ಓಪನ್ ಮಾಡಿ ಪರಿಶೀಲಿಸಿದಾಗ 100 ರೂ. ಮುಖಬೆಲೆಯ ನೋಟುಗಳಿದ್ದವು. ಹಾಗಾಗಿ ಮಹಿಳೆಯರು 500 ರೂ. ಮುಖ ಬೆಲೆ 6 ಲಕ್ಷ ರೂ. ಹಣ, ತಲಾ ಒಂದು ಚೆಕ್, ಆಧಾರ್ ಕಾರ್ಡ್ ಜೆರಾಕ್ಸ್, ಪಾಸ್ ಬುಕ್ ಜೆರಾಕ್ಸ್ ಅನ್ನು ಅಪರಿಚಿತರಿಗೆ ನೀಡಿದ್ದರು. ಕೂಡಲೆ ಅಪರಿಚಿತರು ಗಡಿಬಿಡಿಯಿಂದ ಬೈಕಿನಲ್ಲಿ ಸ್ಥಳದಿಂದ ತೆರಳಿದ್ದರು.
ಕುಮಟಾಗೆ ತೆರಳಿದ ಮಹಿಳೆಯರು ಅಲ್ಲಿ ಬಾಕ್ಸ್ ತೆಗೆದು ನೋಡಿದಾಗ 100 ರೂ. ಮುಖ ಬೆಲೆಯ 15 ಸಾವಿರ ರೂ. ನೋಟುಗಳು ಮಾತ್ರ ಇದ್ದವು. ಉಳಿದಂತೆ ಬಾಕ್ಸಿನಲ್ಲಿ ರದ್ದಿ ಪೇಪರ್ ಇದ್ದವು. ವಂಚನೆಗೊಳಗಾಗಿರುವುದು ಗೊತ್ತಾಗುತ್ತಿದ್ದಂತೆ ಗೋಕರ್ಣ ಠಾಣೆಗೆ ದೂರು ನೀಡಿದ್ದರು. ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200