
ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಸರ್ಕಲ್ ಫ್ಲೈ ಓವರ್ ಬಳಿ ನಿಲ್ಲಿಸಿದ್ದ ಕಾರಿನಿಂದ ಲಕ್ಷಾಂತರ ರೂಪಾಯಿ ನಗದು ಕಳುವಾಗಿರುವ ಘಟನೆ ನಡೆದಿದೆ. ಕೆಲಸದ ಒತ್ತಡದಲ್ಲಿ (engineer) ಕಾರು ಲಾಕ್ ಮಾಡುವುದನ್ನು ಮರೆತಿದ್ದೇ ಕಳ್ಳತನಕ್ಕೆ ಕಾರಣವಾಗಿದೆ.
ಇಂಜಿನಿಯರ್ ಹಾಲೇಶ್ (34) ಎಂಬುವವರು ಹಣ ಕಳೆದುಕೊಂಡ ದುರ್ದೈವಿ. ಹಾಲೇಶ್ ಅವರು ತಮ್ಮ ಫೋರ್ಡ್ ಕಾರಿನಲ್ಲಿ ಉಷಾ ಸರ್ಕಲ್ ಫ್ಲೈ ಓವರ್ ಕೆಳಭಾಗಕ್ಕೆ ಬಂದಿದ್ದರು. ಅಲ್ಲಿನ ನಿಸರ್ಗ ಹೋಟೆಲ್ನಲ್ಲಿ ತಿಂಡಿ ತಿನ್ನಲು ಹೋಗುವಾಗ, ಕೆಲಸದ ಅವಸರದಲ್ಲಿ ಕಾರಿನ ಬಾಗಿಲನ್ನು ಲಾಕ್ ಮಾಡದೆ ಹಾಗೆಯೇ ಬಿಟ್ಟು ಹೋಗಿದ್ದಾರೆ.

ತಿಂಡಿ ಮುಗಿಸಿ ಅಲ್ಲಿಂದ ತಮ್ಮ ಊರಿಗೆ ತೆರಳಿದ ನಂತರ ಕಾರಿನ ಡ್ಯಾಶ್ಬೋರ್ಡ್ ಪರಿಶೀಲಿಸಿದಾಗ, ಅದರಲ್ಲಿ ಇಟ್ಟಿದ್ದ ₹2,00,000ನಗದು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗಕ್ಕೆ ವಾಪಸಾಗಿ ಕಾರು ನಿಲ್ಲಿಸಿದ್ದ ಜಾಗದಲ್ಲಿ ಹುಡುಕಾಟ ನಡೆಸಿದರೂ ಹಣದ ಸುಳಿವು ಸಿಕ್ಕಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?








