
ಶಿವಮೊಗ್ಗ: ಮಲವಗೊಪ್ಪದ ಚನ್ನಬಸವೇಶ್ವರ ದೇವಸ್ಥಾನದ ಸಮೀಪದ ಭದ್ರಾ ನಾಲೆಗೆ (bhadra canal) ಈಜಲು ತೆರಳಿದ್ದ ಐವರು ಬಾಲಕರ ಪೈಕಿ ಓರ್ವ ಮುಳುಗಿ ಮೃತಪಟ್ಟಿದ್ದು, ಸುಮಾರು ಒಂದು ಕಿ.ಮೀ. ದೂರದಲ್ಲಿ ಭಾನುವಾರ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?
ಹರಿಗೆಯ ಶಂಕರ್(13) ಮೃತ ಬಾಲಕ. ಶನಿವಾರ ಮಧ್ಯಾಹ್ನ ಹರಿಗೆಯ ಬಾಲಕರು ಈಜಾಡಲು ಚಾನಲ್ಗೆ ತೆರಳಿದ್ದರು. ನಾಲ್ವರು ಈಜಾಡಿ ನಾಲೆಯಿಂದ ಮೇಲೆ ಬಂದಿದ್ದರೆ ಶಂಕರ್ ನಾಪತ್ತೆಯಾಗಿದ್ದ. ಸಂಜೆವರೆಗೂ ಸ್ನೇಹಿತರು ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಪಾಲಕರು ಶಂಕರ್ನನ್ನು ಹುಡುಕಿಕೊಂಡು ಭದ್ರಾ ನಾಲೆ ಬಳಿ ಬಂದಾಗ ವಿಚಾರ ತಿಳಿದಿದೆ.

ತಕ್ಷಣ ತುಂಗಾನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕರೆಯಿಸಿ ಶಂಕರ್ಗಾಗಿ ತಡರಾತ್ರಿವರೆಗೂ ಶೋಧ ಕಾರ್ಯ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಭಾನುವಾರ ಮತ್ತೆ ಶೋಧ ಕಾರ್ಯ ನಡೆಸಿದಾಗ ಶವ ಪತ್ತೆಯಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








