SHIVAMOGGA LIVE NEWS | 28 ಫೆಬ್ರವರಿ 2022
ಮಂಡಗದ್ದೆ ಸಮೀಪ ಕಾಡಾನೆಗಳ ಹಾವಳಿ ಶುರುವಾಗಿದೆ. ತೋಟಗಳಿಗೆ ದಾಳಿ ಮಾಡಿ ಅಡಕೆ, ಬಾಳೆ ಬೆಳೆಗೆ ಹಾನಿ ಮಾಡುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಆನೆಗಳ ಗುಂಪು ಮಂಡಗದ್ದೆ ಸಮೀಪದ ಕೀಗಡಿ, ಮೇಲಿನ ಕೀಗಡಿ, ಮೂಡ್ಲುಮನೆ ಭಾಗದಲ್ಲಿ ಓಡಾಡಿಕೊಂಡಿವೆ. ರಾತ್ರಿ ವೇಳೆ ತೋಟಗಳಿಗೆ ದಾಳಿ ಮಾಡುತ್ತಿರುವ ಆನೆಗಳು ಬೆಳೆ ಹಾನಿ ಮಾಡುತ್ತಿವೆ. ಆದ್ದರಿಂದ ರೈತರು ತೋಟಗಳಿಗೆ ಹೋಗಲು ಹೆದರುತ್ತಿದ್ದಾರೆ.
ಕೀಗಡಿಯ ಶೇಶಪ್ಪ, ಧರ್ಮಣ್ಣಪ್ಪ, ಹೇಮೇಶ್, ಉಪೇಂದ್ರ ಗೌಡ ಅವರ ತೋಟಗಳಿಗೆ ಆನೆಗಳು ದಾಳಿ ಮಾಡಿ ಅಡಕೆ, ಬಾಳೆ ಬೆಳೆಗೆ ನಷ್ಟ ಉಂಟು ಮಾಡಿವೆ ಎಂದು ತಿಳಿದು ಬಂದಿದೆ. ಬಾಳೆ ಬೆಳೆ ಕಟಾವಿಗೆ ಬಂದ ವೇಳೆ ದಾಳಿ ನಡೆಸಿದ್ದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.