ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಸೆಪ್ಟಂಬರ್ 2020
ಶಿವಮೊಗ್ಗ ಡಿಸಿಸಿ ಬ್ಯಾಂಕ್ನಲ್ಲಿ ನಡೆದಿರುವ ಹಗರಣಗಳ ಸಮಗ್ರ ತನಿಖೆಯಾಗಬೇಕು ಅಂತಾ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ನಲ್ಲಿ ರೈತರಿಗೆ ಸಾಲ ನೀಡಲು 2 ರಿಂದ 3 ಪರ್ಸೆಂಟ್ ಲಂಚ ನೀಡಬೇಕಿದೆ. ತೀರ್ಥಹಳ್ಳಿ ರೈತರು ಸಾಲಕ್ಕೆ ಲಂಚ ನೀಡಲು ನಿರಾಕರಿಸಿದ್ದಾರೆ. ಹಾಗಾಗಿ ಅವರಿಗೆ ಕಡಿಮೆ ಸಾಲ ನೀಡಾಗುತ್ತಿದೆ ಎಂಬ ಆಪಾದನೆಗಳಿವೆ. ಮತ್ತೊಂದೆಡೆ ತೀರ್ಥಹಳ್ಳಿ ಶಾಖೆಯ ನಿರ್ದೇಶಕ ವಿಜಯದೇವ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಟಸ್ಥವಾಗಿ ಉಳಿದುಕೊಂಡಿದ್ದರು. ಹಾಗಾಗಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಕಡಿಮೆ ಮೊತ್ತದ ಸಾಲ ನೀಡಿರುವ ಸಾದ್ಯತೆ ಇದೆ ಎಂದು ಆರೋಪಿಸಿದರು.
https://www.facebook.com/liveshivamogga/videos/1697211123786353/?t=2
ತುಟ್ಟಿ ಭತ್ಯೆಗೂ ಲಂಚದ ಬೇಡಿಕೆ
ಡಿಸಿಸಿ ಬ್ಯಾಂಕ್ನಲ್ಲಿ ಬಹುವರ್ಷದಿಂದ ಕೆಲಸ ಮಾಡುತ್ತಿರುವವರಿಗೆ ತುಟ್ಟಿ ಭತ್ಯೆ ನೀಡುವಲ್ಲೂ ಲಂಚ ಕೇಳಲಾಗುತ್ತಿದೆ. ಮೂರು ಕೋಟಿ ತುಟ್ಟಿ ಭತ್ಯೆಗೆ ಒಂದೂವರೆ ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಕೆಲವರು ತಿಳಿಸಿದ್ದಾರೆ ಎಂದರು.
ನಿರ್ಮಾಣದಲ್ಲೂ ಅವ್ಯವಹಾರ
ಇತ್ತೀಚಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಸ್ವಾಗತ ಕಮಾನು ನಿರ್ಮಿಸಲಾಯಿತು. ಈ ಕಾಮಗಾರಿ, ಕಟ್ಟಡ ನವೀಕರಣ, ರಿಪ್ಪನ್ಪೇಟೆಯಲ್ಲಿ ನಿರ್ಮಿಸಿದ ಡೇಟಾ ಎಂಟ್ರಿ ಕಟ್ಟಡ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಆರೋಪವಿದೆ ಎಂದರು.
ರಾಜೀನಾಮೆ ಕೊಡಬಾರದು
ಆರ್.ಎಂ.ಮಂಜುನಾಥಗೌಡ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ಹಲವು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಅವರು ರಾಜೀನಾಮೆ ನೀಡಬಾರದು. ಪ್ರಕರಣದ ಸಂಪೂರ್ಣ ತನಿಖೆಯಾಗಬೇಕು. ರಾಜೀನಾಮೆ ಪುಕಾರು ಹಬ್ಬಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹುನ್ನಾರ ನಡೆಸಿರುವ ಸಾದ್ಯತೆ ಇದೆ. ಬಹು ಸಮಯದಿಂದ ಜೆಡಿಎಸ್ ಜಿಲ್ಲಾಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಟ್ಟಿರುವುದಾಗಿ ಹೇಳುತ್ತಿದ್ದಾರೆ. ರಾಜೀನಾಮೆ ಸಲ್ಲಿಸಿದ್ದರೂ ಪಕ್ಷದ ಸಭೆ ಕರೆಯುತ್ತಾರೆ. ಇದು ಹಾಗೆ ಎಂದು ವ್ಯಂಗ್ಯ ಮಾಡಿದರು.
ಡಿಸಿಸಿ ಬ್ಯಾಂಕ್ನಲ್ಲಿ ನಡೆಸಿದಿರುವ ಹಗರಣಗಳ ಕುರಿತು ಎಂಡಿ ಅವರು ಸಮಗ್ರ ತನಿಖೆ ನಡೆಸಬೇಕು. ಸರ್ಕಾರವೇ ಸುಮೋಟೊ ಪ್ರಕರಣ ದಾಖಲು ಮಾಡಬೇಕು. ಇಲ್ಲವಾದರಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ಹಾಪ್ಕಾಮ್ಸ್ ಉಪಾಧ್ಯಕ್ಷ ವಿಜಯ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]