ಶಿವಮೊಗ್ಗ ಲೈವ್.ಕಾಂ | SHANKARAGHATTA NEWS | 2 MARCH 2021
ಪರೀಕ್ಷಾ ಶುಲ್ಕ ಕಡಿತಗೊಳಿಸಬೇಕು ಎಂದು ಆಗ್ರಹಿಸಿ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್ನಲ್ಲಿರುವ ಆಡಳಿತ ಭವನದ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ಎರಡನೇ ಸೆಮಿಸ್ಟರ್ಗೆ ಪರೀಕ್ಷಾ ಶುಲ್ಕ ಪಾವತಿಸಲಾಗಿದೆ. ಕರೋನ ಕಾರಣದಿಂದಾಗಿ ಪರೀಕ್ಷೆ ನಡೆಸಿಲ್ಲ. ಅಂಕಪಟ್ಟಿಯ ಶುಲ್ಕ ಹೊರತುಪಡಿಸಿ ಉಳಿದ ಶುಲ್ಕವನ್ನು ಈ ವರ್ಷದ ಪರೀಕ್ಷಾ ಶುಲ್ಕ ಎಂದು ಜಮಾ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಕರೋನದಿಂದಾಗಿ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ, ಆರ್ಥಿಕ ಸಂಕಷ್ಟವಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷಾ ಶುಲ್ಕ ಪಾವತಿಸುವಂತೆ ಒತ್ತಡ ಹೇರುವುದು ಸರಿಯಲ್ಲ. ಈಗಾಗಲೇ ಕೆಲವರು ಶುಲ್ಕ ಪಾವತಿಸಿದ್ದು, ಅವರಿಗೆ ಹಣವನ್ನು ಹಿಂತಿರುಗಿಸಬೇಕು. ಕಳೆದ ಸೆಮಿಸ್ಟರ್ನ ಪರೀಕ್ಷಾ ಶುಲ್ಕವನ್ನೇ ಮೂರನೇ ಸೆಮಿಸ್ಟರ್ಗೆ ವರ್ಗಾಯಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಈ ಸಂಬಂಧ ಕುವೆಂಪು ವಿವಿ ಕುಲಸಚಿವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಕುಲಸಚಿವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ವಿವಿಧ ವಿಭಾಗದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯ ವಿಡಿಯೋ ರಿಪೋರ್ಟ್
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]