ಶಿವಮೊಗ್ಗದ ಲೈವ್.ಕಾಂ | SHIMOGA NEWS | 11 ಫೆಬ್ರವರಿ 2022
ನಕಲಿ ದಾಖಲೆ ಒದಗಿಸಿ ಡಿ.ಡಿ. ಪಡೆದ ಆರೋಪ ಸಂಬಂಧ ಮೂವರ ವಿರುದ್ಧ ಖಾಸಗಿ ಬ್ಯಾಂಕ್’ನ ಮ್ಯಾನೇಜರ್ ದೂರು ನೀಡಿದ್ದಾರೆ.
ಅರುಣ್ ಕುಮಾರ್, ಚೇತನ್ ಮತ್ತು ಅಶೋಕ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಇಂಡಸ್ ಇಂಡ್ ಬ್ಯಾಂಕ್’ನ ಗೃಹ ಸಾಲ ವಿಭಾಗದ ಮ್ಯಾನೇಜರ್ ನವೀನ್ ಕುಮಾರ್ ಅವರು ದೂರು ನೀಡಿದ್ದಾರೆ.
ಮೂವರು ಆರೋಪಿಗಳು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಸ್.ಆರ್. ನಂಬರ್ ಒಂದರ ನಕಲಿ ದಾಖಲೆ ಮಾಡಿಕೊಂಡು ಬಂದು ಬ್ಯಾಂಕ್ ಹೆಸರಿನಲ್ಲಿ ಆದಾರ ಮಾಡಿಸಿದ್ದಾರೆ. ಅಲ್ಲದೆ 17,42, 434 ರೂ. ಡಿ.ಡಿಯನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ನಕಲಿ ದಾಖಲೆ ಒದಗಿಸಿದ ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಾಫಿಕ್ ಠಾಣೆ ಇನ್ಸ್ ಪೆಕ್ಟರ್, ಸಿಬ್ಬಂದಿಗೆ ಬೆದರಿಕೆ, ನಿಂದನೆ
ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ ಕಾರು ತೆಗೆಯುವಂತೆ ತಿಳಿಸಿದ ಟ್ರಾಫಿಕ್ ಪೊಲೀಸರಿಗೆ ಬೆದರಿಕೆಯೊಡ್ಡಿ, ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಶರಾವತಿ ನಗರದಲ್ಲಿ ಘಟನೆ ಸಂಭವಿಸಿದೆ. ನಂದೀಶ್ ಮತ್ತು ಅವರ ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮನೆ ಮುಂದೆ ಮನೆ ಮುಂದೆ ನಿಲ್ಲಿಸಿದ್ದ ತೆಗೆಯುವಂತೆ ಪೊಲೀಸರು ತಿಳಿಸಿದ್ದಾರೆ. ಅದೇ ಮಾರ್ಗವಾಗಿ ಆಂಬುಲೆನ್ಸ್ ಕುಡ ಬಂದಿತ್ತು. ಆದ್ದರಿಂದ ಕಾರು ತೆಗೆಯುವಂತೆ ಟ್ರಾಫಿಕ್ ಎಎಸ್ಐ ನಂಜುಂಡಪ್ಪ ಮನವಿ ಮಾಡಿದ್ದರು. ಆದರೆ ಕಾರು ಮಾಲೀಕ ಎಎಸ್ಐ ಅವರನ್ನು ನಿಂದಿಸಿದ್ದಾನೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಟ್ರಾಫಿಕ್ ಠಾಣೆ ಇನ್ಸ್ ಪೆಕ್ಟರ್ ಸಿದ್ದೇಗೌಡ ಅವರು ಸ್ಥಳಕ್ಕೆ ಬಂದಿದ್ದಾರೆ. ಅವರನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲು ಮಾಡಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.