ಶಿವಮೊಗ್ಗ: ಕೇಂದ್ರ ಸರ್ಕಾರ 2026-27ರಲ್ಲಿ ನಡೆಸುವ ಸಮಗ್ರ ಜನಗಣತಿಯ ವರದಿ ಬಂದ ಬಳಿಕ ಅಲ್ಲಿನ ವಸ್ತುನಿಷ್ಠ ಸಂಖ್ಯೆಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಒಳಮೀಸಲು (internal reservation) ಜಾರಿಗೆ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ಅಧ್ಯಕ್ಷಡಿ.ಆರ್.ಗಿರೀಶ್ ಆಗ್ರಹಿಸಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಿರೀಶ್, ಸರ್ಕಾರ ಒಂದುವೇಳೆ ತರಾತುರಿಯಲ್ಲಿ ಕ್ರಮಕ್ಕೆ ಮುಂದಾದರೆ ಬಂಜಾರ ಸಮುದಾಯ ಕಾಂಗ್ರೆಸ್ಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಪಾರ್ಟಿ ವೇಳೆ ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಯುವಕ ಸಾವು
101 ಜಾತಿಗಳ ಐಕ್ಯತೆ, ಸಮಗ್ರತೆಗೆ ಧಕ್ಕೆ ತರುವ ನ್ಯಾ. ನಾಗಮೋಹನ್ ದಾಸ್ ವರದಿಯ ಶಿಫಾರಸುಗಳನ್ನು ತಿರಸ್ಕರಿಸಬೇಕು. ಒಳಮೀಸಲು ಅನ್ವಯದ ಈಗಿನ ರೋಸ್ಟರ್ ಪದ್ಧತಿಯನ್ನು ಕೂಡಲೇ ಬದಲಾಯಿಸಿ, ಹಳೆ ರೋಸ್ಟರ್ ಅನ್ವಯ ನೇಮಕ ಪ್ರಕ್ರಿಯೆ ನಡೆಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಶೇ.17, ಶೇ.7ರಷ್ಟು ಮೀಸಲು ಜಾರಿ ಮಾಡಲು ಸಂವಿಧಾನ ಷೆಡ್ಯೂಲ್ 9ರಲ್ಲಿ ಸೇರಿಸಲು ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗದ ಮೂಲಕ ಕೇಂದ್ರಕ್ಕೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಬಂಜಾರ, ಭೋವಿ, ಕೊರಚ, ಕೊರಮ ಇವುಗಳು ಸ್ಪೃಶ್ಯ ಜಾತಿಗಳಾಗಿದ್ದು ಕೂಡಲೇ ಇವರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಬೇಕು ಎಂದು ಅರ್ಥವಿಲ್ಲದ ಹಾಗೂ ಮಾನ್ಯವಲ್ಲದ ಹೇಳಿಕೆಗಳನ್ನು ಕೆಲವರು ನೀಡುತ್ತಿದ್ದಾರೆ. ಅದಕ್ಕೆ ಸರ್ಕಾರ ಕಿವಿಗೊಡಬಾರದು. ಒಳಮೀಸಲು ಅನ್ವಯ ಸರ್ಕಾರ ಹೊಸ ರೋಸ್ಟರ್ ಅಡಿಯಲ್ಲಿ ಎ, ಬಿ, ಸಿ ಎಂಬ ವರ್ಗೀಕರಣ ಮಾಡಿ ಎ ವರ್ಗಕ್ಕಷ್ಟೇ ಆದ್ಯತೆ ನೀಡಿ ಉಳಿದವರಿಗೆ ಪ್ರಾತಿನಿಧ್ಯ ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರ ಕೂಡಲೇ ಈ ನೇಮಕಾತಿಯ ರೋಸ್ಟರ್ ವಿಚಾರದಲ್ಲಿ ಆಗಿರುವ ತಾರತಮ್ಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉಮಾಮಹೇಶ್ವರ ನಾಯ್ಕ, ಪ್ರಕಾಶ್ ನಾಯ್ಕ್, ಮಂಜು ನಾಯ್ಕ್, ಕೃಷ್ಣನಾಯ್ಕ್, ಸಂತೋಷ್ ನಾಯ್ಕ್ ಇತರರಿದ್ದರು.

About The Editor
ನಿತಿನ್ ಆರ್.ಕೈದೊಟ್ಲು






