ಶಿವಮೊಗ್ಗ : ಕಾಶ್ಮೀರದ ಪೆಹಾಲ್ಗಾಮ್ನಲ್ಲಿ ಅಟ್ಟಹಾಸ ಮೆರೆದ ಉಗ್ರರ (terrorist) ವಿರುದ್ಧ ಶಿವಮೊಗ್ಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜನ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಉಗ್ರರು, ಉಗ್ರಗಾಮಿಗಳಿಗೆ ಪ್ರಚೋದನೆ ನೀಡುವವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಳಗ್ಗೆಯಿಂದ ವಿವಿಧ ಸಂಘಟನೆಗಳು ಸಾಲು ಸಾಲು ಪ್ರತಿಭಟನೆ ನಡೆಸಿವೆ. ಪೆಹಾಲ್ಗಾಮ್ನಲ್ಲಿ ಉಗ್ರರ (terrorist) ಗುಂಡಿಗೆ ಹತರಾದವರಿಗೆ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಎಲ್ಲೆಲ್ಲಿ ಯಾರೆಲ್ಲ ಪ್ರತಿಭಟನೆ ನಡೆಸಿದರು?
ಮುಸ್ಲಿಂ ಸಮುದಾಯದಿಂದ ಆಕ್ರೋಶ
ಶಿವಮೊಗ್ಗ : ಕಾಶ್ಮೀರದಲ್ಲಿನ ದಾಳಿ ಖಂಡಿಸಿ ಸುನ್ನಿ ಮರ್ಕಜಿ ಜಾಮಿಯಾ ಮಸೀದಿ ವತಿಯಿಂದ ಮುಸ್ಲಿಂ ಸಮುದಾದವರು ಪ್ರತಿಭಟನೆ ನಡೆಸಿದರು. ಭಯೋತ್ಪಾದಕರ (terrorist) ವಿರುದ್ಧ ಘೋಷಣೆ ಕೂಗಿದ ಮುಸ್ಲಿಂ ಸಮುದಾಯದವರು ಬಳಿಕ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಿದರು. ಮಸೀದಿ ಕಮಿಟಿ ಅಧ್ಯಕ್ಷ ಶೇಖ್ ಮುನಾವರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷ, ಮುಫ್ತಿ ಗುಲಾಂ ಬರ್ಕಾತಿ, ಮೌಲಾನಾ ಹಬೀಬ್ ಸಹಾಬಿ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ » ನಾಳೆ ಅರ್ಧ ದಿನ ಶಿವಮೊಗ್ಗ ಸಿಟಿ ಬಂದ್, ಅಂಗಡಿ ಮುಂಗಟ್ಟು ಕ್ಲೋಸ್
ವಕೀಲರ ಸಂಘದಿಂದ ಆಕ್ರೋಶ
ಶಿವಮೊಗ್ಗ : ಕಾಶ್ಮೀರದಲ್ಲಿನ ಉಗ್ರರ ಕೃತ್ಯ ಖಂಡಿಸಿ ವಕೀಲರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪಹಾಲ್ಗಾಮ್ ದಾಳಿ ಮನುಕುಲವೆ ತಲೆತಗ್ಗಿಸುವಂತದ್ದು. ಉಗ್ರರ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕು. ಅವರನ್ನು ಬೆಂಬಲಿಸುವವರನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ, ಪ್ರಮುಖರಾದ ಎಸ್.ಎ.ಶ್ರೀನಿವಾಸ್, ಎಂ.ಬಿ.ಮಾಲತೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಇದನ್ನೂ ಓದಿ » ಕಾಶ್ಮೀರ ದಾಳಿ, ಶಿವಮೊಗ್ಗದಲ್ಲಿ ಮಂಜುನಾಥ್ ಮನೆ ಸುತ್ತಲು ಬ್ಯಾರಿಕೇಡ್, ಪೊಲೀಸ್ ಬಂದೋಬಸ್ತ್
ಸರ್ವಧರ್ಮ ಗುರುಗಳ ನೇತೃತ್ವದಲ್ಲಿ ಶ್ರದ್ಧಾಂಜಲಿ
ಶಿವಮೊಗ್ಗ : ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮೃತರಾದವರಿಗೆ ಶಾಂತಿಗಾಗಿ ನಡಿಗೆ ಸಂಘಟನೆ ವತಿಯಿಂದ ಗೋಪಿ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸರ್ವಧರ್ಮದ ಧರ್ಮಗುರುಗಳ ನೇತೃತ್ವದಲ್ಲಿ ಕ್ಯಾಂಡಲ್ ಬೆಳಗಿ ಮೌನಾಚರಣೆ ಮಾಡಲಾಯಿತು.
ಮನುಷ್ಯ ಹಕ್ಕಿಯಂತೆ ಹಾರುವಂತೆ ಕಲಿತಿದ್ದಾನೆ. ನೀರಿನಲ್ಲಿ ಮೀನಿನಂತೆ ಈಜಲು ಕಲಿತಿದ್ದಾನೆ. ಆದರೆ ಭೂಮಿ ಮೇಲೆ ಮನುಷ್ಯನಾಗಿ ಬದುಕುವುದನ್ನು ಮರೆತಿದ್ದಾನೆ. ಪಹಾಲ್ಗಾಮಾದಲ್ಲಿ ನಡೆದಿದ್ದು ಅತ್ಯಂತ ಹೇಯ ಕೃತ್ಯ.
ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬೆಕ್ಕಿನಕಲ್ಮಠ
ಮಾನವೀಯತೆ ಇಲ್ಲದವರು, ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತಿದವರು ಧರ್ಮ ವಿರೋಧಿಗಳು. ಧರ್ಮಾಂಧತೆಯಿಂದ ಅನೈತಿಕ ಚಟುವಟಿಕೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಾವೆಲ್ಲ ಸೇರಿ ಸುಭದ್ರ ಭಾರತ ಕಟ್ಟಬೇಕಿದೆ.
ಶಾಹುಲ್ ಅಬ್ದುಲ್ ಹಮೀದ್, ಮೌಲ್ವಿ
ವೈಜ್ಞಾನಿಕವಾಗಿ ಪ್ರಗತಿ ಆಗುತ್ತಿರುವ ಸಂದರ್ಭ ಇಂತಹ ಅಮಾನವೀಯ ಕೃತ್ಯ ನಡೆಯುತ್ತಿರುವುದು ಖಂಡನೀಯ. ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳ ಪ್ರೇರಣೆ ಮೂಡಿಸಬೇಕು. ಆಗ ಮಾತ್ರ ಇಂತಹ ಕೃತ್ಯ ತಡೆಯಲು ಸಾಧ್ಯ.
ಫಾ. ಕ್ಲಿಫರ್ಡ್ ಪಿಂಟೋ, ಸನ್ನಿಧಿಯ ನಿರ್ದೇಶಕ
ದಯವಿಲ್ಲದ ಧರ್ಮ ಯಾವುದು? ಎಂದು ಬಸವಣ್ಣ ಕೇಳಿದ್ದರು. ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರು ಇದೆಯಾ ಎಂದು ಪೂರ್ಣಚಂದ್ರ ತೇಜಸ್ವಿ ಕೇಳಿದ್ದರು. ಧರ್ಮದ ಹೆಸರಿನಲ್ಲಿ ಮನುಷ್ಯನನ್ನು ಕೊಲ್ಲುವಂತಾಗಿರುವುದು ನೀಚ ಕೃತ್ಯ.
ಡಾ. ಬಸವಮರುಳಸಿದ್ಧ ಸ್ವಾಮೀಜಿ, ಬಸವಕೇಂದ್ರ
ಮಡಿದವರಿಗೆ ಯುವ ಕಾಂಗ್ರೆಸ್ನಿಂದ ಶ್ರದ್ಧಾಂಜಲಿ
ಶಿವಮೊಗ್ಗ : ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ ನೇತೃತ್ವದಲ್ಲಿ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಶ್ರದ್ಧಾಂಜಲಿ ಸಭೆ ನಡೆಯಿತು. ಕ್ಯಾಂಡಲ್ ಹಚ್ಚಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮೌನಾಚರಣೆ ಮಾಡಿದರು. ಹೆಚ್.ಸಿ.ಯೋಗೇಶ್, ರಮೇಶ್ ಹೆಗ್ಡೆ, ವಿಜಯ್ ಕುಮಾರ್, ಶಿವಕುಮಾರ್, ಮಧುಸೂದನ್, ಚೇತನ್, ಅಕ್ಬರ್, ಇಮ್ರಾನ್ ಸೇರಿದಂತೆ ಹಲವರು ಇದ್ದರು.
ಯಾವ ಧರ್ಮಗಳು ಕೊಲ್ಲಲು ಹೇಳುವುದಿಲ್ಲ. ಕೊಲ್ಲುವವರಿಗೆ ಧರ್ಮವೇ ಇಲ್ಲ. ಮಾನವ ಸಮಾಜ ತಲೆತಗ್ಗಿಸುವಂತಹ ಹೇಯಕೃತ್ಯವಿದು. ಶಿವಮೊಗ್ಗದ ಮಂಜುನಾಥ್ ಕೂಡ ಬಲಿಯಾಗಿದ್ದಾರೆ. ಈ ಕುಟುಂಬದ ಜೊತೆ ನಾವಿರುತ್ತೇವೆ.
ಆರ್.ಪ್ರಸನ್ನ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಇದನ್ನೂ ಓದಿ » ಕಾಶ್ಮೀರ ದಾಳಿ, ಶಿವಮೊಗ್ಗದ ಉದ್ಯಮಿಯ ಮೃತದೇಹದ ಮುಂದೆ ಕಣೀರಾದ ಪತ್ನಿ, ಧೈರ್ಯ ತುಂಬಿದ ಮಿನಿಸ್ಟರ್
ಕರವೇ ಸಿಂಹ ಸೇನೆಯಿಂದ ಆಕ್ರೋಶ
ಶಿವಮೊಗ್ಗ : ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ವತಿಯಿಂದ ಗೋಪಿ ವೃತ್ತದಲ್ಲಿ ಉಗ್ರರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಾಜ್ಯಾಧ್ಯಕ್ಷ ಎಂ.ರವಿಪ್ರಸಾದ್, ಜಿಲ್ಲಾಧ್ಯಕ್ಷ ಮಧುಸೂದನ್, ಪ್ರಮುಖರಾದ ನಯಾಜ್, ಗೋಪಿ, ಕಿರಣ್, ವೆಂಕಟೇಶ್, ಶರತ್, ಜಯಕೀರ್ತಿ ಇದ್ದರು.
ಕರವೇ ಪ್ರತಿಭಟನೆ, ಶ್ರದ್ಧಾಂಜಲಿ
ಶಿವಮೊಗ್ಗ : ಭಯೋತ್ಪಾದಕರ ದಾಳಿ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಎಸ್ಡಿಪಿಐನಿಂದ ಕ್ಯಾಂಡಲ್ ಮಾರ್ಚ್
ಶಿವಮೊಗ್ಗ : ಕಾಶ್ಮೀರದ ಉಗ್ರರ ದಾಳಿ ಖಂಡಿಸಿ ಎಸ್ಡಿಪಿಐ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಅಮೀರ್ ಅಹಮದ್ ಸರ್ಕಲ್ನಲ್ಲಿ ಸಂಜೆ ಕ್ಯಾಂಡಲ್ ಮಾರ್ಚ್ ಮಾಡಿ ಕಾಶ್ಮೀರದಲ್ಲಿ ಹತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200