SHIVAMOGGA LIVE NEWS | 20 JUNE 2024
SHIMOGA : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ (Actor)ಮತ್ತು ಸಹಚರರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಮತ್ತು ವಿವಿಧ ಸಂಘಟನೆಗಳ ಪ್ರತಿಭಟನೆ ನಡೆಸಲಾಯಿತು.
ವೀರಶೈವ ಕಲ್ಯಾಣ ಮಂದಿರದಿಂದ ಆರಂಭವಾದ ಗೋಪಿ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಸಲಾಯಿತು.
ಯಾರೆಲ್ಲ ಏನೇನು ಹೇಳಿದರು?
ಬಿ.ವೈ.ರಾಘವೇಂದ್ರ, ಸಂಸದ : ಜಂಗಮ ಸಮಾಜದ ರೇಣುಕಾಸ್ವಾಮಿ ಬಾಯಿಗೆ ಮಾಂಸ, ಮೂಳೆಗಳನ್ನು ತುರುಕಿ ಬಳಿಕ ಅಮಾನುಷವಾಗಿ ಕೊಲೆ ಮಾಡಿದ್ದಾರೆ ಎಂಬ ಅಂಶ ತನಿಖೆಯಲ್ಲಿ ಗೊತ್ತಾಗಿದೆ. ದೇಹದ ಸೂಕ್ಷ್ಮ ಭಾಗಗಳಿಗೆ ಒದ್ದು, ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಲಾಗಿದೆ. ಪ್ರಭಾವಿಗಳನ್ನು ಬಂಧಿಸಲಾಗಿದೆ. ಇದೇ ರೀತಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸರ್ಕಾರ ಯಾವುದೇ ಪ್ರಭಾವಕ್ಕೆ ಒಳಗಾಗದೆ ಕಾನೂನು ಕ್ರಮ ಜರುಗಿಸಬೇಕು. ಮೃತ ರೇಣುಕಾಸ್ವಾಮಿ ಕುಟುಂಬದೊಂದಿಗೆ ಎಲ್ಲ ಸಮಾಜದವರೂ ಇದ್ದಾರೆ. ಆ ಕುಟುಂಬಕ್ಕೆ ಸಂಕಷ್ಟ ಎದುರಾಗಲು ಈ ನಾಗರಿಕ ಸಮಾಜ ಬಿಡುವುದಿಲ್ಲ.
ಎಸ್.ಎಸ್. ಜ್ಯೋತಿಪ್ರಕಾಶ್, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ : ರೇಣುಕಾಸ್ವಾಮಿ ಪ್ರಕರಣವನ್ನು ರಾಜ್ಯದ ಎಲ್ಲ ಮಾಧ್ಯಮಗಳು ನಿರಂತರವಾಗಿ ಪ್ರಸಾರ ಹಾಗೂ ಪ್ರಚಾರ ಮಾಡಿದ ಕಾರಣ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತು. ಹತ್ಯೆ ಮಾಡಿದವರು ಕಾನೂನಿನ ಬಿಗಿಮುಷ್ಟಿಗೆ ಸಿಲುಕಿದರು. ಮುಂದೆಯೂ ಈ ತನಿಖೆ ಹಾದಿ ತಪ್ಪದಂತೆ ಸರ್ಕಾರ ನೋಡಿಕೊಳ್ಳಬೇಕು.
ಆಯನೂರು ಮಂಜುನಾಥ್, ಮಾಜಿ ಸಂಸದ : ಈ ಹಿಂದೆ ದರ್ಶನ್ ತನ್ನ ಹೆಂಡತಿ ಮೇಲೆ ಹಲ್ಲೆ ನಡೆಸಿ ಕೆಲ ಸಮಯ ಜೈಲು ಸೇರಿದ್ದರು. ಆತ ಜೈಲಿನಿಂದ ಬಿಡುಗಡೆಯಾದ ಬಳಿಕ ಅಭಿಮಾನಿಗಳು ಆತನನ್ನು ಮೆರವಣಿಗೆಯಲ್ಲಿ ಕರೆದೊಯ್ದರು. ಪತ್ನಿಗೆ ಹೊಡದವನನ್ನು ಮಹಾಶೂರ ಎಂಬಂತೆ ನಡೆದುಕೊಂಡರು. ಅಭಿಮಾನಿಗಳ ಇಂತಹ ನಡೆಯಿಂದ ಆತ ಮತ್ತಷ್ಟು ದಾರಿ ತಪ್ಪಿದ. ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್, ಸಿನಿಮಾದಲ್ಲಿ ಮಾತ್ರ ಖಳನಾಯಕರಾಗಿದ್ದರು. ಆದರೆ ಈತ ನಿಜ ಜೀವನಲ್ಲೇ ಖಳನಾಯಕನಾಗಿದ್ದಾನೆ. ರೇಣುಕಾಸ್ವಾಮಿ ವಿಷಯದಲ್ಲಿ ರಾಕ್ಷಸನಂತೆ ನಡೆದುಕೊಂಡಿದ್ದಾನೆ. ಯಾರನ್ನೂ, ಯಾವ ಕಾರಣಕ್ಕೂ ರಕ್ಷಿಸುವುದಿಲ್ಲ. ಕಾನೂನು ತನ್ನ ಕೆಲಸ ಮಾಡಲಿದೆ.
ಮಾಜಿ ಎಂಎಲ್ಸಿ ಎಸ್.ರುದ್ರೇಗೌಡ, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ವೀರಶೈವ ಸಮಾಜದ ಪ್ರಮುಖರಾದ ಎನ್. ಜೆ.ರಾಜಶೇಖರ್, ಎಚ್.ವಿ.ಮಹೇಶ್ವರಪ್ಪ, ಸಂತೋಷ್ ಬಳ್ಳೇಕೆರೆ, ಎಸ್.ಪಿ.ದಿನೇಶ್, ಮುರುಗೇಶ್, ಹೆಚ್.ಸಿ.ಯೋಗೇಶ್, ಅನಿತಾ ರವಿಶಂಕರ್, ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ನಟ ಅನಿರುದ್ಧ, ಶೆಫ್ ಚಿದಂಬರ ಪ್ರಮೋಷನ್, ದರ್ಶನ್ ಕೇಸ್ ಕುರಿತು ಮಾತು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200