SHIVAMOGGA LIVE NEWS | 7 MARCH 2024
SHIMOGA : ಶಿವರಾತ್ರಿಯಂದು ಹರಕೆರೆಯ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಪರಮೇಶ್ವರನನ್ನು ಧ್ಯಾನಿಸಿ, ಪ್ರಾರ್ಥಿಸಿ, ಸಂಕಷ್ಟ ನಿವಾರಣೆ ಮಾಡುವಂತೆ ಬೇಡಿಕೊಳ್ಳುತ್ತಾರೆ. ದೇವಾಲಯದ ಆವರಣದಲ್ಲಿರುವ ಬೃಹತ್ ಶಿವನ ಮೂರ್ತಿಗೆ ಕೈ ಮುಗಿದು, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ.
ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ರಾಮಾಯಣ ಕಾಲದ ಹಿನ್ನೆಲೆ ಇದೆ. ಬೇಲೂರು, ಹಳೆಬೀಡು ದೇಗುಲಗಳ ಜೊತೆಗೆ ನಂಟು ಇದೆ. ಈ ದೇಗುಲ ಶೃಂಗೇರಿ ಮಠದ ನಿರ್ವಹಣೆಯಲ್ಲಿದೆ. ಇಲ್ಲಿರುವ ಲಿಂಗದ ಕುರಿತು ಕುತೂಹಲಕಾರಿ ಸಂಗತಿಯು ಇದೆ.
ರಾಮೇಶ್ವರ ದೇವಸ್ಥಾನದ ಬಗ್ಗೆ 3 ಪ್ರಮುಖ ಸಂಗತಿ
ಶ್ರೀರಾಮೇಶ್ವರ ದೇವಸ್ಥಾನಕ್ಕೆ ಪೌರಾಣಿಕ ಹಿನ್ನೆಲೆ ಇದೆ. ರಾಮಾಯಣ ಕಾಲದ ಹಲವು ಘಟನೆಗಳು ಇಲ್ಲಿ ನಡೆದಿವೆ ಎಂಬ ನಂಬಿಕೆ ಇದೆ. ಇಲ್ಲಿ ಸಹಸ್ರ ಲಿಂಗ ಉದ್ಭವವಾಗಿತ್ತು ಎಂದು ಹೇಳಲಾಗುತ್ತದೆ. ಇನ್ನು, ಬೇಲೂರು, ಹಳೆಬೀಡು ದೇಗುಲಗಳು ನಿರ್ಮಿಸಿದ ಕಾಲದಲ್ಲಿಯೆ ತುಂಗಾ ನದಿ ದಂಡೆಯ ಮೇಲೆ ಈ ದೇಗುಲವನ್ನೂ ರಾಜರು ನಿರ್ಮಾಣ ಮಾಡಿದ್ದರು. ದೇಗುಲದ ಒಳಾಂಗಣದ ಕಂಬಗಳು ಇದಕ್ಕೆ ಸಾಕ್ಷಿ. ಆದರೆ ಆಗ ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡಿರಲಿಲ್ಲ. ಹಾಗಾಗಿ ಸ್ಥಳೀಯರೆ ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಪೂಜೆ ಸಲ್ಲಿಸುತ್ತಿದ್ದರು.
ಇಲ್ಲಿ ಪೂಜೆ ಸಲ್ಲಿಸುತ್ತಿದ್ದ ಬ್ರಾಹ್ಮಣ ಸಮುದಾಯದವರು ನಾನಾ ಕಾರಣಕ್ಕೆ ಊರು ತೊರೆಯುವಂತಾಯಿತು. ಆಗ ದೇವಸ್ಥಾನವನ್ನು ಶೃಂಗೇರಿ ಮಠದ ಸುಪರ್ದಿಗೆ ನೀಡಿದ್ದರು. ಅಲ್ಲಿಂದ ಶೃಂಗೇರಿ ಮಠವೇ ದೇಗುಲದ ನಿರ್ವಹಣೆ ಮಾಡುತ್ತಿದೆ. ಈ ಹಿಂದೆ ದೇಗುಲಕ್ಕೆ ಭೇಟಿ ನೀಡಿದ್ದ ಶೃಂಗೇರಿ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ ಅವರು, ರಾಮಯಣ ಕಾಲದ ಹಿನ್ನಲೆ ಇದ್ದಿದ್ದರಿಂದ ಇದಕ್ಕೆ ಶ್ರೀ ರಾಮೇಶ್ವರ ದೇವಸ್ಥಾನ ಎಂದು ನಾಮಕರಣ ಮಾಡಿದರು.
ಈ ಮೊದಲು ದೇವಸ್ಥಾನದ ಹಿಂದೆ ಮತ್ತು ಮುಂದೆ ಬಾಗಿಲು ಇತ್ತು. ಪೂರ್ವದ ಬಾಗಿಲಿನಿಂದ ದೇವರಿಗೆ ಪೂಜೆಯಾಗುತ್ತಿತ್ತು. ಆದರೆ ದಾರಿಯಲ್ಲಿ ಹೋಗುವ ಜನರಿಗೆ ದೇವಸ್ಥಾನ, ದೇವರು ಕಾಣಿಸುತ್ತಿರಲಿಲ್ಲ. ಹಾಗಾಗಿ ಪೂರ್ವದ ಬಾಗಿಲು ಮುಚ್ಚಿ, ಪಶ್ಚಿಮಾಭಿಮುಖವಾಗಿ ದೇವರ ಪೂಜೆ ಆರಂಭಿಸಲಾಯಿತು. ಆದರೆ ದೇಗುಲದ ಒಳಗಿರುವ ಶಿವಲಿಂಗವನ್ನು ಮಾತ್ರ ತಿರುಗಿಸಲಿಲ್ಲ. ಇದೆ ಕಾರಣಕ್ಕೆ ಶ್ರೀ ರಾಮೇಶ್ವರ ದೇವಸ್ಥಾನದ ಶಿವಲಿಂಗದ ಪಾಣಿ ಪೀಠದ ಬಲ ಭಾಗದಲ್ಲಿ ಸೋಮಸೂತ್ರ (ತೀರ್ಥ ಬೀಳುವ ಜಾಗ) ಇದೆ. ಸಾಮಾನ್ಯವಾಗಿ ಎಲ್ಲಾ ದೇಗುಲದಲ್ಲಿ ಸೋಮಸೂತ್ರ ಎಡ ಭಾಗದಲ್ಲಿ ಇರಲಿದೆ. ಈಶ್ವರ ಸರ್ವತೋಮುಖನಾಗಿದ್ದಾನೆ ಎಂದು ಈ ಮೊದಲು ಲಿಂಗಕ್ಕೆ ಪೂಜೆ ಮಾಡುತ್ತಿದ್ದ ಹಿಂಬದಿಯಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ.
ಪ್ರತಿ ಸೋಮವಾರ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಶಿವರಾತ್ರಿ ಸಂದರ್ಭ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಇಡೀ ದಿನ ದರ್ಶನಕ್ಕೆ ವ್ಯವಸ್ಥೆ ಇರುತ್ತದೆ. ರಾತ್ರಿ ಜಾಗರಣೆ ಪೂಜೆ ಇರಲಿದೆ. ದೇವರಿಗೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಗುತ್ತದೆ.
ಇದನ್ನೂ ಓದಿ – ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರದ ಮಾರ್ಗ ಬದಲಾವಣೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200