ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜೂನ್ 2020
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಶಂಕುಸ್ಥಾಪನೆ ವೇಳೆ, ಶಾಸಕರೊಬ್ಬರಿಗೆ ವೇದಿಕೆ ಮೇಲೆ ಚೇರ್ ಸಿಗದೆ ಸಿಟ್ಟಾದ ಘಟನೆ ನಡೆಯಿತು. ವೇದಿಕೆಯಿಂದಲೇ ಕೆಳಗಿಳಿಯಲು ಹೊರಟವರನ್ನು ಸಚಿವ, ಸಂಸದರು ಸಮಾಧಾನಪಡಿಸಿದರು.
ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಇವತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರಿಗೆ ಚೇರ್ ವ್ಯವಸ್ಥೆ ಮಾಡಿರಿಲಿಲ್ಲ. ವೇದಿಕೆ ಹತ್ತಿದ್ದ ಅವರು ಚೇರ್ ಸಿಗದೆ ಸಿಟ್ಟಾದರು. ತಾವು ಕೆಳಗಿಳಿಯುವುದಾಗಿ ಹೇಳಿ ಹೊರಟರು. ಆಗ ಸಮಾಧಾನಪಡಿಸಿದ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸೀಟ್ ವ್ಯವಸ್ಥೆ ಮಾಡಿದರು.
ವೇದಿಕೆಯ ಮೂಲೆಯಲ್ಲಿ ಎಂಎಲ್ಎ
ಶಾಸಕರಾದ ಕುಮಾರ್ ಬಂಗಾರಪ್ಪ, ಆರಗ ಜ್ಞಾನೇಂದ್ರ ಮತ್ತು ಹರತಾಳು ಹಾಲಪ್ಪ ಅವರು ಕಾರ್ಯಕ್ರಮಕ್ಕೆ ತಡವಾಗಿ ಬಂದರು. ಅವರಿಗೂ ಸೀಟ್ ವ್ಯವಸ್ಥೆ ಮಾಡುವುದು ಕಷ್ಟವಾಯಿತು. ಆರಗ ಜ್ಞಾನೇಂದ್ರ ಅವರು ವೇದಿಕೆಯ ಮೂಲೆಯಲ್ಲಿ ಕುಳಿತರು. ಕುಮಾರ್ ಬಂಗಾರಪ್ಪ ಮತ್ತು ಹರತಾಳು ಹಾಲಪ್ಪ ಅವರಿಗೆ ವೇದಿಕೆ ಮಧ್ಯ ಭಾಗದಲ್ಲಿ ಚೇರ್ ವ್ಯವಸ್ಥೆ ಆಯಿತು.
ಸೀಟ್ ಕಿರಿಕ್ಗೆ ಕಾರಣವೇನು?
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಅವರಿಗೆ ವೇದಿಕೆ ಮೇಲೆ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಪ್ರೊಟೊಕಾಲ್ ಪ್ರಕಾರ ಅವರು ವೇದಿಕೆ ಮೇಲೆ ಕೂರುವಂತಿಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ವೇದಿಕೆ ಮೇಲಿರಬೇಕು ಎಂಬ ನಿಯಮವಿದೆ. ಆದರೆ ಇದನ್ನು ವಿರೋಧಿಸಿ ಅವರಿಗೆ ಸೀಟ್ ವ್ಯವಸ್ಥೆ ಮಾಡಿದ್ದು ಪ್ರಶ್ನಾರ್ಹವಾಗಿದೆ. ಇದರಿಂದಾಗಿ ಶಾಸಕರೊಬ್ಬರಿಗೆ ಚೇರ್ ಸಿಗದಂತಾಗಿ ಮುಜುಗರಕ್ಕೀಡಾದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]