ಶಿವಮೊಗ್ಗ ಲೈವ್.ಕಾಂ | SHIMOGA | 10 ಫೆಬ್ರವರಿ 2020
ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿಹಳ್ಳಿ ಗ್ರಾಮಗಳ ಸ್ಥಳಾಂತರಕ್ಕೆ ನಾವು ಮನಃಪೂರ್ವಕವಾಗಿ ಒಪ್ಪಿದ್ದು, ತಮಗೆ ಕೂಡಲೇ ಪುನರ್ ವಸತಿ ಕಲ್ಪಿಸಬೇಕು ಎಂದು ಎರಡೂ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಸಿ.ರಾಜಪ್ಪ, ಎಂ.ಜೆ.ರಾಜಪ್ಪ, ಎಸ್.ಜೆ.ಮಂಜಪ್ಪ ಮತ್ತಿತರರು, ಶಿವಮೊಗ್ಗ ತಾಲ್ಲೂಕು ಕಸಬಾ-1 ಹೋಬಳಿಗೆ ಒಳಪಡುವ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ, ಶೆಟ್ಟಿಹಳ್ಳಿ ಮತ್ತು ಚಿತ್ರಶೆಟ್ಟಿ ಹಳ್ಳಿ ಗ್ರಾಮಗಳಿಗೆ ಇದುವರೆಗೂ ಮೂಲ ಸೌಕರ್ಯ ಇಲ್ಲ. ಪುನರ್’ವಸತಿಗಾಗಿ ನಾವು ಸರ್ಕಾರಕ್ಕೆ ಒತ್ತಾಯಿಸುತ್ತಲೇ ಇದ್ದೇವೆ. ಆದರೆ ನಮ್ಮ ಒತ್ತಾಯದ ಕೂಗು ಯಾರಿಗೂ ಕೇಳಿಸಿಲ್ಲ. ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದರು.
ಸದ್ಯ ಇಲ್ಲಿ ವಾಸಿಸುತ್ತಿರುವ 110 ಕುಟುಂಬಗಳ ಪೈಕಿ 90ಕ್ಕೂ ಹೆಚ್ಚು ಕುಟುಂಬಗಳು ಸ್ವಇಚ್ಚೆಯಿಂದ ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಹೊರಬರಲು ಸಮ್ಮತಿಸಿವೆ. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇನ್ನುಳಿದವರು ಕೂಡ ಮುಂದಿನ ದಿನದಲ್ಲಿ ನಮ್ಮ ಜೊತೆ ಬರುತ್ತಾರೆ. ಗೋವಿಂದಾಪುರ ಗ್ರಾಮದ ಸ.ನಂ.8 ಮತ್ತು 9ರಲ್ಲಿ ನಮಗೆ ಪುನರ್ ವಸತಿ ಕಲ್ಪಿಸಿದರೆ, ನಾವು ಅಲ್ಲಿಗೆ ತೆರಳಲು ಸಿದ್ದ. ಇದಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಎಸ್.ಜಿ.ಚಟ್ಟಪ್ಪ, ಅರ್ಜುನ್, ತಿಮ್ಮಪ್ಪ, ಪ್ರದೀಪ್ ಸೇರಿದಂತೆ ಶೆಟ್ಟಿಹಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]