SHIVAMOGGA LIVE NEWS | 8 AUGUST 2023
SHIMOGA : ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ (JAMBOO SAVARI) ಈ ಬಾರಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದಲೂ (ELEPHANT CAMP) ಆನೆಗಳನ್ನು ಕರೆದುಕೊಂಡು ಹೋಗಲು ಸಿದ್ಧತೆ ನಡೆಯುತ್ತಿದೆ.
ಪ್ರತಿ ಬಾರಿ ಜಂಬೂ ಸವಾರಿಗಾಗಿ (JAMBOO SAVARI) ಕೊಡಗಿನ ದುಬಾರೆ, ಚಾಮರಾಜನಗರದ ಕೆ.ಗುಡಿ, ಬಂಡೀಪುರದ ರಾಮಾಪುರ, ನಾಗರಹೊಳೆಯ ಮತ್ತಿಗೋಡು, ಬಳ್ಳೆ ಶಿಬಿರಗಳಲ್ಲಿ ಆನೆಗಳಿಗೆ ಪರಿಶೀಲನೆ ನಡೆಸಲಾಗುತ್ತದೆ. ಅರಣ್ಯಾಧಿಕಾರಿ, ವನ್ಯಜೀವಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ತೆರಳಿ ಆನೆಗಳ ಆರೋಗ್ಯ, ದೈಹಿಕ ಸ್ಥಿತಿ ಪರಿಶೀಲಿಸಿ ಆಯ್ಕೆ ಮಾಡುತ್ತಾರೆ. ಈ ಬಾರಿ ಶಿವಮೊಗ್ಗದ ಸಕ್ರೆಬೈಲಿನಲ್ಲೂ ಆನೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಎಲ್ಲ ಬಿಡಾರಗಳಿಂದ 20 ರಿಂದ 25 ಆನೆಗಳ ಪಟ್ಟಿ ಮಾಡಿ 14 ಆನೆಗಳನ್ನು ಅಂತಿಮಗೊಳಿಸಲಾಗುತ್ತದೆ. ಸೋಮವಾರ ಶಿವಮೊಗ್ಗದ ವನ್ಯಜೀವಿ ವಲಯ ಅಧಿಕಾರಿಗಳು, ಮೈಸೂರು ವನ್ಯಜೀವಿ ವಲಯದ ಅಧಿಕಾರಿಗಳು ಬಿಡಾರಕ್ಕೆ ಭೇಟಿ ನೀಡಿ ಆನೆಗಳ ಪರಿಶೀಲನೆ ನಡೆಸಿದರು. ಒಂದು ಅಥವಾ ಎರಡು ಆನೆಗಳನ್ನು ಮೈಸೂರು ದಸರಾಗೆ ಕರೆದೊಯ್ಯುವ ಸಾಧ್ಯತೆ ಇದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹರೋಹರ ಜಾತ್ರೆಗೆ ಅಂತಿಮ ಸಿದ್ಧತೆ, ಹೇಗಿದೆ ವ್ಯವಸ್ಥೆ? ಏನೆಲ್ಲ ಅಂಗಡಿಗಳಿವೆ?
ಶಿವಮೊಗ್ಗ ಜಂಬೂ ಸವಾರಿ ಮೇಲೆ ಪರಿಣಾಮ
ಪ್ರತಿ ವರ್ಷ ಮೈಸೂರಿನಂತೆ ಶಿವಮೊಗ್ಗದಲ್ಲೂ ದಸರಾ ಜಂಬೂ ಸವಾರಿ ನಡೆಯುತ್ತಿದೆ. ಚಾಮುಂಡೇಶ್ವರಿ ವಿಗ್ರಹವುಳ್ಳ ಬೆಳ್ಳಿ ಅಂಬಾರಿಯನ್ನು ಸಾಗರ ಆನೆ ಹೊರುತ್ತದೆ. ಆಲೆ, ಹೇಮಾವತಿ, ಭಾನುಮತಿ ಆನೆಗಳು ಸಾಥ್ ನೀಡುತ್ತವೆ. ಇವುಗಳಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅಭ್ಯಾಸ ಇರುವುದರಿಂದ ಇದೇ ಆನೆಗಳನ್ನು ಅವರು ಆಯ್ಕೆ ಮಾಡುವ ಸಾಧ್ಯತೆ ಸಹ ಇದೆ. ಮೈಸೂರಿಗೆ ಆನೆಗಳನ್ನು ಕಳುಹಿಸಿದರೆ ಶಿವಮೊಗ್ಗ ದಸರಾಕ್ಕೆ ತೊಂದರೆಯಾಗುವ ಸಾಧ್ಯತೆ ಇದ್ದು ಇದನ್ನು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ.