ಶಿವಮೊಗ್ಗ ಲೈವ್.ಕಾಂ | SAGARA NEWS | 10 JUNE 2021
ಕರೋನ ಆತಂಕದ ನಡುವೆ ಸಾಗರದಲ್ಲಿ ಡೆಂಗ್ಯೂ ಭೀತಿ ಎದುರಾಗಿದೆ. ದಿನೆ ದಿನೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕ ಹಾಲಪ್ಪ ಸೂಚಿಸಿದ್ದಾರೆ.
![]() |
ಡೆಂಡ್ಯೂ ನಿಯಂತ್ರಣ ಸಂಬಂಧ ಸಾಗರ ನಗರಸಭೆ ರಂಗಮಂದಿರ ಆವರಣದಲ್ಲಿ ಶಾಸಕ ಹರತಾಳು ಹಾಲಪ್ಪ ಅವರು ಅಧಿಕಾರಿಗಳ ಸಭೆ ನಡೆಸಿದರು. ತಕ್ಷಣದಿಂದ ಡೆಂಗ್ಯೂ ನಿಯಂತ್ರಣ ಮತ್ತು ಜಾಗೃತಿ ಕಾರ್ಯ ನಡೆಸುವಂತೆ ಸೂಚಿಸಿದರು.
ಶಾಸಕರ ಸೂಚನೆಗಳೇನು?
ತಾಲೂಕಿನಲ್ಲಿ ಕಳೆದ ತಿಂಗಳು 10 ಡೆಂಗ್ಯೂ ಪ್ರಕರಣ ಪತ್ತೆಯಾಗಿತ್ತು. ಜೂನ್ ತಿಂಗಳಲ್ಲಿ ಈಗಾಗಲೇ 24 ಕೇಸ್ಗಳು ಗೊತ್ತಾಗಿವೆ.
ಹಲವರು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಪ್ರಕರಣಗಳ ನಿಖರ ಮಾಹಿತಿ ತಿಳಿಯುತ್ತಿಲ್ಲ. ಆದ್ದರಿಂದ ಖಾಸಗಿ ಆಸ್ಪತ್ರೆ, ಲ್ಯಾಬ್ಗಳಿಂದಲೂ ಡೆಂಗ್ಯೂ ಪ್ರಕರಣಕ್ಕೆ ಚಿಕಿತ್ಸೆ ಪಡೆದವರ ವಿವರ ಸಂಗ್ರಹಿಸಬೇಕು.
ಸ್ಥಳೀಯ ಆಡಳಿತದ ಜೊತೆಗೆ ಆರೋಗ್ಯ ಇಲಾಖೆ ಕೈಜೋಡಿಸಿ, ಡೆಂಗ್ಯೂ ಕುರಿತು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಬೇಕು.
ಮಳೆಗಾಲ ಶುರುವಾಗುತ್ತಿದ್ದು, ಅಲ್ಲಲ್ಲಿ ನೀರು ನಿಲ್ಲಲಿದೆ. ಇದರಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗಲಿದೆ. ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಜನರು ಕೂಡ ಈ ಬಗ್ಗೆ ಜಾಗೃತರಾಗುವಂತೆ ಮಾಡಬೇಕು ಎಂದು ಶಾಸಕ ಹಾಲಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಇಬ್ಬರಿಗೆ ಡೆಂಗ್ಯೂ ಜೊತೆ ಕರೋನ
24 ಪ್ರಕರಣಗಳಲ್ಲಿ ಇಬ್ಬರಿಗೆ ಡೆಂಗ್ಯೂ ಜೊತೆಗೆ ಕರೋನ ಪಾಸಿಟಿವ್ ದೃಢಪಟ್ಟಿದೆ ಎಂದು ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ ಸಭೆಗೆ ತಿಳಿಸಿದ್ದಾರೆ. ಗಾಂಧಿ ನಗರ, ವಿನೋಬನಗರ, ಎಸ್.ಎನ್.ನಗರ, ಸೂರನಗದ್ದೆ, ಸೊರಬ ತಾಲೂಕಿನ ಕ್ಯಾಸನೂರು ಸೇರಿದಂತೆ ಇನ್ನಿತರೆ ಭಾಗದಲ್ಲಿ ಡೆಂಗ್ಯೂ ಪೀಡತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಂಗ್ಯೂಗೆ ಸಕಾಲದಲ್ಲಿ ಚಿಕಿತ್ಸೆ ಲಭ್ಯವಿದೆ. ಜನರು ಭೀತಿಗೊಳ್ಳುವ ಆತಂಕವಿಲ್ಲ. ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಫಾಗಿಂಗ್ ಇಲ್ಲ, ದ್ರಾವಣ ಸಿಂಪಡಣೆಯಷ್ಟೆ
ಸಾಗರ ಪಟ್ಟಣದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ. ಫಾಗಿಂಗ್ ಮಾಡುವುದು ಕ್ಯಾನ್ಸರ್ ಕಾರಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ಫಾಗಿಂಗ್ ಬದಲು ಮೆಲಾಥಿಯಾನ್ ದ್ರಾವಣ ಸಿಂಪಡಣೆ ಮಾಡಲಾಗುತ್ತದೆ. ಅಲ್ಲದೆ ಜಾಗೃತಿಯನ್ನೂ ಮೂಡಿಸಲಾಗುತ್ತದೆ ಎಂದು ನಗರ ಸಭೆ ಪೌರಾಯುಕ್ತ ಹೆಚ್.ಕೆ.ನಾಗಪ್ಪ ಸಭೆಗೆ ತಿಳಿಸಿದರು.
ತಹಶೀಲ್ದಾರ್ ಚಂದ್ರಶೇಖರ್ ನಾಯಕ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷ ತುಕಾರಾಮ್, ಸದಸ್ಯರಾದ ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್, ತಾಲೂಕು ಪಂಚಾಯಿತಿ ಇಒ ಪುಷ್ಪಾ ಕಮ್ಮಾರ್, ಸೇರಿದಂತೆ ಹಲವರು ಇದ್ದರು.
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200