ಸಾಗರ : ವಿಶ್ವವಿಖ್ಯಾತ ಜೋಗ ಜಲಪಾತವನ್ನು (Jog Falls) ಸರ್ವಋತು ಪ್ರವಾಸಿ ತಾಣವಾಗಿ ರೂಪಿಸಲಾಗುತ್ತದೆ. 185 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಜೋಗ ಜಲಪಾತ ಆವರಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಬೇಳೂರು ಗೋಪಾಲಕೃಷ್ಣ ಪರಿಶೀಲನೆ ನಡೆಸಿದರು. ಬಳಿಕ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿದ್ದರು.
ಎಂಎಲ್ಎ ಹೇಳಿದ 3 ಪ್ರಮುಖಾಂಶ
ಪ್ರವಾಸಿಗರು ವರ್ಷ ಪೂರ್ತಿ ಜೋಗ ಜಲಪಾತಕ್ಕೆ ಭೇಟಿ ನೀಡುವಂತಿರಬೇಕು. ಪ್ರವಾಸಿಗರನ್ನು ಸೆಳೆಯಲು ರೈನ್ ಡಾನ್ಸ್, ಉದ್ಯಾನವನ, ಈಜುಕೊಳ ಸೇರಿದಂತೆ ವಿವಿಧ ಕಾಮಗಾರಿ ನಡೆಸಲಾಗುತ್ತಿದೆ. ಜೋಗ ಅಭಿವೃದ್ಧಿ ಎಂದರೆ ಕೇವಲ ಕಾಂಕ್ರೀಟ್ ಕಾಡಿನಂತೆ ಕಾಣಬಾರದು. ಪ್ರತಿಯೊಂದು ಕಾಮಗಾರಿಯಲ್ಲೂ ಪ್ರಕೃತಿ ಸಹಜ ಹಚ್ಚ ಹಸಿರಿನ ನೋಟ, ಮಲೆನಾಡಿನ ಸೊಬಗನ್ನು ಒಳಗೊಂಡು ಮೂಡಿ ಬರಬೇಕು.

ಜೋಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದ್ವಿಪಥವಾಗಿ ವಿಸ್ತರಿಸುವುದು, ತ್ರೀ ಸ್ಟಾರ್ ಹೊಟೇಲ್ ವ್ಯವಸ್ಥೆ ಆಗಬೇಕಿದೆ. ತಲಕಳಲೆ ಡ್ಯಾಂನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಬೇಕು. ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವತ್ತ ಗಮನ ಹರಿಸಲಾಗುತ್ತದೆ. ಅಲ್ಲದೆ ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಗೆ ಪೂರಕವಾಗಿ ಜಾಗ ಬಿಡಬೇಕು.

ಜೋಗ ಅಭಿವೃದ್ಧಿಗೆ ಈಗಾಗಲೇ 95 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ನಡೆಯುತ್ತಿದೆ. ಇನ್ನು 99.54 ಕೋಟಿ ರೂ. ಹಣ ಬಿಡುಗಡೆಯಾಗಲಿದೆ. ಶೀಘ್ರ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಾಮಗಾರಿ ಲೋಕಾರ್ಪಣೆ ಮಾಡಿಸುವ ಯೋಚನೆ ಇದೆ.
ಜೋಗದಲ್ಲಿ ನಡೆಯುತ್ತಿರುವ ಕಾಮಗಾರಿಗಳು ನಿರೀಕ್ಷಿತ ಮಟ್ಟದೆಲ್ಲಿ ವೇಗ ಪಡೆಯುತ್ತಿಲ್ಲ. ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಉಳಿಕೆ ಹಣ ಬಿಡುಗಡೆಗೆ ಜಿಲ್ಲಾಡಳಿತ ಸಿದ್ಧವಿದೆ.
ಗುರುದತ್ತ ಹೆಗಡೆ, ಶಿವಮೊಗ್ಗ ಜಿಲ್ಲಾಧಿಕಾರಿ

![]()
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾದಿಕಾರಿ ಹೇಮಂತ್ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಧರ್ಮಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ರಾಜು ಸೇರಿದಂತೆ ಹಲವರು ಇದ್ದರು.


ಇದನ್ನೂ ಓದಿ » ಶಿವಮೊಗ್ಗ ಡಿಸಿಸಿ ಬ್ಯಾಂಕ್ನಿಂದ 50 ಲಕ್ಷ ರೂ. ಚೆಕ್ ಹಸ್ತಾಂತರ