ಸಾಗರ: ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಸಂದರ್ಭ ಸಾಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರಿಗೆ, ಭಕ್ತರಿಗೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ದ್ವಿಚಕ್ರ, ಲಘುವಾಹನಗಳು ಹಾಗೂ ಭಾರಿ ವಾಹನಗಳ ಸಂಚಾರ ನಿಷೇಧ, ನಿಲುಗಡೆ, ಮಾರ್ಗ ಬದಲಾವಣೆ (traffic) ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ನೀಡಿದ್ದಾರೆ.
ಎಲ್ಲೆಲ್ಲಿ ಏನೇನು ಬದಲಾವಣೆ?
ಸಾಗರ ಟೌನ್ ಪೊಲೀಸ್ ಠಾಣೆ ಎದುರಿನ ಜೆ.ಸಿ. ವೃತ್ತದಿಂದ ಜೆ.ಸಿ.ರಸ್ತೆ ಮೂಲಕ ಸಾಗರ ಸರ್ಕಲ್ ಮಾರ್ಗವಾಗಿ ಐತಪ್ಪ ವೃತ್ತದವರೆಗೆ ಪ್ಯಾರಲಲ್ ರಸ್ತೆಗಳು, ಅಂಬೇಡ್ಕರ್ ಸರ್ಕಲ್ (ಲಿಂಬು ಸರ್ಕಲ್) ನಿಂದ ಸಾಗರ ಸರ್ಕಲರ್ವರೆಗೆ, ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಸರ್ಕಲ್ನಿಂದ ಸಾಗರ ಸರ್ಕಲ್ವರೆಗೆ ವಾಹನ ಸಂಚಾರ ನಿಷೇಧಿಸಿದೆ.

ದುರ್ಗಾಂಬ ವೃತ್ತ (ಸೊರಬ ಸರ್ಕಲ್) ಮೂಲಕ ಸೊರಬ ರಸ್ತೆ, ಮಾರ್ಕೆಟ್ ರಸ್ತೆ ಮೂಲಕ ಎಸ್.ಎನ್. ವೃತ್ತದವರೆಗೆ ಎಲ್ಲಾ ಮಾದರಿ ವಾಹನಗಳ ನಿಲುಗಡೆ ನಿಷೇಧ ಹಾಗೂ ಬೆಳಗ್ಗೆ 10 ರಿಂದ ರಾತ್ರಿ 12 ರವರೆಗೆ ಎಲ್ಲಾ ಮಾದರಿಯ ಸರಕು ವಾಹನಗಳ ಸಂಚಾರ ನಿಷೇಧ.
ಇದನ್ನೂ ಓದಿ – ಶಿವಮೊಗ್ಗದ ಸೆಂಟ್ರಲ್ ಜೈಲ್ ಒಳಗೆ ರಾತ್ರಿ ತೂರಿ ಬಂತು ಪೊಟ್ಟಣ, ತೆಗೆದು ನೋಡಿದ ಸಿಬ್ಬಂದಿಗೆ ಶಾಕ್
ಸರ್ಕರಿ ಆಸ್ಪತ್ರೆಯ ಹಿಂದಿನ ಗೇಟ್ನಿಂದ ಚರ್ಚ್ ಪಕ್ಕದ ರಸ್ತೆ ಮತ್ತು ಖಚಾನೆ ರಸ್ತೆಗಳು, ಬಿ.ಹೆಚ್.ರಸ್ತೆವರೆಗೆ ವಾಹನ ನಿಲುಗಡೆ ನಿಷೇಧ (ಆಸ್ಪತ್ರೆಗೆ ಬರುವ ವಾಹನ ಮತ್ತು ಅಂಬ್ಯುಲೆನ್ಸ್ ಸುಗಮ ಸಂಚಾರದ ಅನುಕೂಲಕ್ಕಾಗಿ).

ವರದಹಳ್ಳಿ ಕ್ರಾಸ್ನಿಂದ ಹಂಪಯ್ಯನ ಕೊಳದವರೆಗೆ ಫೆ.3 ರಿಂದ ಫೆ.20 ರವರೆಗೆ (ಜಾತ್ರೆ ಅವಧಿಯಲ್ಲಿ) ಎನ್.ಹೆಚ್.-69 ಬಿ.ಹೆಚ್ ರಸ್ತೆಯಲ್ಲಿ ಸರದಿಯಂತೆ ಲಘು 4 ಚಕ್ರದ ವಾಹನ ಮತ್ತು ದ್ವಿಚಕತ್ರ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ. ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತೀಗಣ್ಯ ವ್ಯಕ್ತಿಗಳ ವಾಹನಗಳು, ಅಂಬ್ಯುಲೆನ್ಸ್ ಹಾಗೂ ಮೂಲ ಸೌಕರ್ಯ ಒದಗಿಸುವ ವಾಹನಗಳ ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿರುತ್ತದೆ.








