ಶಿಕಾರಿಪುರ: ಪಟ್ಟಣದ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಶಿಕಾರಿಪುರ ಪಟ್ಟಣ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಓರ್ವ ಆರೋಪಿಯನ್ನು (carpenter) ಬಂಧಿಸಿ, ಆತನಿಂದ 7 ಸಿಂಗಲ್ ಬ್ಯಾರಲ್ ನಾಡಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ.
ಭದ್ರಾಪುರ ಗ್ರಾಮದ 3ನೇ ಕ್ರಾಸ್ ನಿವಾಸಿ ಲಕ್ಷ್ಮಣಪ್ಪ (67) ಬಂಧಿತ ಆರೋಪಿ. ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಲಕ್ಷ್ಮಣಪ್ಪ, ತನ್ನ ಮನೆಯ ಪಕ್ಕದ ಹಳೆಯ ಮನೆಯಲ್ಲಿ ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?
ಖಚಿತ ಮಾಹಿತಿ ಮೇರೆಗೆ ದಾಳಿ
ಫೆಬ್ರವರಿ 4ರಂದು ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಎ.ಎಸ್.ಐ ವಿಜಯ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಖಚಿತಪಡಿಸಿಕೊಂಡಿದ್ದರು. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದ ಶಿಕಾರಿಪುರ ಪಟ್ಟಣ ಠಾಣೆಯ ಪೊಲೀಸರು ಲಕ್ಷ್ಮಣಪ್ಪ ಮನೆ ಮೇಲೆ ದಿಢೀರ್ ದಾಳಿ ನಡೆಸಿದರು. ಈ ಸಂದರ್ಭ ಹಳೆಯ ಮನೆಯಲ್ಲಿ ಬಚ್ಚಿಟ್ಟಿದ್ದ 7 ಸಿಂಗಲ್ ಬ್ಯಾರಲ್ ನಾಡಬಂದೂಕುಗಳು ಹಾಗೂ ಅವುಗಳ ತಯಾರಿಕೆಗೆ ಬಳಸುತ್ತಿದ್ದ ಉಪಕರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಲಕ್ಷ್ಮಣಪ್ಪಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಲ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಿಕಾರಿಪುರ ಡಿವೈಎಸ್ಪಿ ಕೇಶವ ಕೆ.ಇ ಮೇಲ್ವಿಚಾರಣೆಯಲ್ಲಿ, ಶಿಕಾರಿಪುರ ನಗರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಎಂ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪಿಎಸ್ಐ ಶರತ್ ಹೆಚ್, ಸಿಬ್ಬಂದಿ ಕೊಟ್ರೇಶಪ್ಪ, ಪ್ರದೀಪ್.ಕೆ., ನಾಗರಾಜ, ರವಿನಾಯ್ಕ, ರವಿಕುಮಾರ್ ಅವರ ತಂಡ ಕಾರ್ಯಾಚರಣೆ ನಡೆಸಿದೆ.


About The Editor
ನಿತಿನ್ ಆರ್.ಕೈದೊಟ್ಲು






