SHIVAMOGGA LIVE|19 JUNE 2023
SHIMOGA : ಮನೆಯೊಂದರ ಬಳಿ ಚಿರತೆ (Cheetah) ಪ್ರತ್ಯಕ್ಷವಾಗಿದ್ದು ನಾಯಿಯ ಮೇಲೆ ದಾಳಿ ಮಾಡಿದೆ. ಇದರ ಸಿಸಿಟಿವಿ ದೃಶ್ಯ ಶಿವಮೊಗ್ಗ ಲೈವ್ಗೆ ಲಭ್ಯಾಗಿದೆ. ಪದೇ ಪದೆ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಶಿವಮೊಗ್ಗ ತಾಲೂಕು ಕ್ಯಾತಿನಕೊಪ್ಪದ ನವೀನ್ ಎಂಬುವವರ ಮನೆಯಲ್ಲಿ ಚಿರತೆ (Cheetah) ಪ್ರತ್ಯಕ್ಷವಾಗಿದೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಮನೆ ಬಳಿ ಬಂದ ಚಿರತೆ ಸಾಕು ನಾಯಿಯ ಮೇಲೆ ದಾಳಿ ಮಾಡಿತ್ತು. ಇದರ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪದೇ ಪದೆ ಕಾಣಿಸುತ್ತಿದೆ ಚಿರತೆ
ಕ್ಯಾತಿನಕೊಪ್ಪ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಈ ಚಿರತೆ ಆಗಾಗ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನವೀನ್ ಅವರ ಪಕ್ಕದ ಮನೆಯಲ್ಲಿ ಕಳೆದ ವಾರ ಕರುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಇದೆ ರೀತಿ ಹಲವು ಬಾರಿ ಚಿರತೆ ಕಾಣಿಸಿಕೊಂಡಿದ್ದಿದೆ.
ಹೊಲಕ್ಕೆ ಹೋಗಲು ರೈತರಿಗೆ ಭೀತಿ
ಹೊಳಲೂರು ಸಮೀಪದ ಕ್ಯಾತಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಸೋಮಿನಕೊಪ್ಪ, ಸೂಗೂರು ಬಳಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಇದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಭಾಗದ ರೈತರು ತರಕಾರಿ ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದಾರೆ. ರಾತ್ರಿ ಜಮೀನಿಗೆ ಹೋಗಿ ನೀರು ಹಾಯಿಸುವುದು ಅನಿವಾರ್ಯ. ಆದರೆ ಚಿರತೆ ಭೀತಿಯಿಂದ ರಾತ್ರಿ ಮನೆಯಿಂದ ಹೊರಗೆ ಹೋಗಲು ಭಯ ಪಡುತ್ತಿದ್ದಾರೆ.
ಚಿರತೆ ಭೀತಿ ಇದೇ ಮೊದಲಲ್ಲ
ಕ್ಯಾತಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಸೋಮಿನಕೊಪ್ಪ, ಸೂಗೂರು ಗ್ರಾಮಗಳಲ್ಲಿ ಚಿರತೆ ಭಿತಿ ಇದೆ ಮೊದಲಲ್ಲ. ಕಳೆದ ಡಿಸೆಂಬರ್ನಲ್ಲಿ ಕ್ಯಾತಿನಕೊಪ್ಪದಲ್ಲಿಯೆ ಚಿರತೆ ಪ್ರತ್ಯಕ್ಷವಾಗಿತ್ತು. ಬೋನ್ ಇಟ್ಟು ಅರಣ್ಯಾಧಿಕಾರಿಗಳು ಅದನ್ನು ಸೆರೆ ಹಿಡಿದಿದ್ದರು. ಕಳೆದ ಎರಡು ವರ್ಷದಲ್ಲಿ ಕ್ಯಾತಿನಕೊಪ್ಪದಲ್ಲಿ 2, ಆಲದಹಳ್ಳಿಯಲ್ಲಿ 2 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಈಗ ಪುನಃ ಚಿರತೆ ಕಾಣಿಸಿಕೊಂಡಿದ್ದು ಭೀತಿ ಹೆಚ್ಚಿಸಿದೆ.
ಮತ್ತೆ ಬೋನ್ ಇಟ್ಟು ಕಾರ್ಯಾಚರಣೆ
ಕ್ಯಾತಿನಕೊಪ್ಪದ ನವೀನ್ ಅವರ ಮನೆಯಲ್ಲಿ ಚಿರತೆ ಕಾಣಿಸಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾತ್ರಿ ವೇಳೆ ಗಸ್ತು ತಿರುಗಿ ಚಿರತೆಗಾಗಿ ಹುಡುಕಾಟ ನಡೆಸಿದ್ದಾರೆ. ಚಿರತೆ ಸೆರೆಗೆ ಅಲ್ಲಲ್ಲಿ ಬೋನ್ ಇಟ್ಟಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಬಿಜೆಪಿ ಸಭೆಯಲ್ಲಿ ‘ಕಳ್ಳ, ಮಳ್ಳ’ ಹೇಳಿಕೆ, ಭಾಷಣದ ವೇಳೆ ಕರೆಂಟ್ ಕಟ್, ಏನೇನಾಯ್ತು? – ಇಲ್ಲಿದೆ 8 ಫಟಾಫಟ್ ಅಪ್ಡೇಟ್
ಅರಣ್ಯ ಇಲಾಖೆ ಎಚ್ಚರಿಕೆ ಏನು?
ಜನ ಸಂಖ್ಯೆ ಹೆಚ್ಚಳದ ರೀತಿಯಲ್ಲೆ ಪ್ರಾಣಿಗಳ ಸಂತತಿಯು ಹೆಚ್ಚಾಗಿದೆ. ಚಿರತೆಗಳ ಸಂಖ್ಯೆಯು ಏರಿಕೆಯಾಗಿದೆ. ಆದ್ದರಿಂದ ಒಂದು ಹಿಡಿದರೆ ಮತ್ತೊಂದು ಕಾಣಿಸಿಕೊಳ್ಳುತ್ತಿದೆ. ಕಾಡು ಖಾಲಿಯಾಗಿದೆ. ಅಲ್ಲಿ ಆಹಾರ ಸಿಗದೆ ಚಿರತೆಗಳು ಊರಿಗೆ ಬರುತ್ತಿವೆ. ಇಲ್ಲಿ ದನ, ಕರು, ನಾಯಿಗಳು ಸಿಗುವುದರಿಂದ ಪದೇ ಪದೆ ಊರೊಳಗೆ ಬರುತ್ತಿವೆ. ಚಿರತೆಗಳನ್ನು ಹಿಡಿಯಲು ಬೋನ್ ಇಡಲಾಗುತ್ತಿದೆ. ದನ, ಕರು ಇರುವುದರಿಂದ ಕೊಟ್ಟಿಗೆಯನ್ನು ಸ್ವಲ್ಪ ಬಂದೊಬಸ್ತ್ ಮಾಡಿಕೊಳ್ಳುವಂತೆ ರೈತರಿಗೆ ಸೂಚನೆ ನೀಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ – IMPACT | ಶಿವಮೊಗ್ಗ ಲೈವ್ ವರದಿ ಇಂಪ್ಯಾಕ್ಟ್, ಶಿವಮೊಗ್ಗ – ಸಾಗರ ಹೆದ್ದಾರಿಯಲ್ಲಿ ತಪ್ಪಿತು ಮತ್ತಷ್ಟು ಅಪಘಾತ
ಪದೇ ಪದೆ ಚಿರತೆ ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ರಾತ್ರಿ ವೇಳೆ ಜೀವ ಭಯದಲ್ಲಿಯೇ ಮನೆಯಿಂದ ಹೊರ ಬರುವ ಸ್ಥತಿ ನಿರ್ಮಾಣವಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200