SHIVAMOGGA LIVE NEWS | 20 JUNE 2024
THIRTHAHALLI : ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ ತಹಶೀಲ್ದಾರ್ ಕೊಠಡಿ ಬಾಗಿಲಲ್ಲಿ ಕುಳಿತು ಪ್ರತಿಭಟನೆ (Protest) ನಡೆಸಿದರು. ಜಿಲ್ಲಾಧಿಕಾರಿಗೆ ಕರೆ ಮಾಡಿ ತಾಲೂಕು ಕಚೇರಿ ಆಡಳಿತ ಸುಧಾರಣೆ ಮಾಡ್ತೀರೋ ಇಲ್ಲವೋ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರಗ ಆಕ್ರೋಶಕ್ಕೆ ಕಾರಣವೇನು?
‘ಇಂಗ್ಲಿಷ್ ಭಾಷೆಯಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲು ದಲಿತ ಮಹಿಳೆಯೊಬ್ಬರು 4 ತಿಂಗಳಿನಿಂದ ಕಚೇರಿಗೆ ಬರುತ್ತಿದ್ದಾರೆ. ಇನ್ನೂ ಪ್ರಮಾಣ ಪತ್ರ ಸಿಕ್ಕಿಲ್ಲ. ಕಚೇರಿ ಸಿಬ್ಬಂದಿ ಮಹಿಳೆಗೆ ನೀನು ದಿನಾ ಬಂದು ಕಿರಿಕಿರಿ ಮಾಡ್ತೀಯ. ಸುಮ್ಮನೆ ವಾಪಸ್ ಹೋಗು ಎಂದು ಗದರಿಸುತ್ತಾರೆ. ಮಧ್ಯವರ್ತಿಗಳ ಕೆಲಸ ಸಲೀಸಾಗಿ ಆಗುತ್ತಿದೆ. ಜನರ ಕೆಲಸ ಆಗುತ್ತಿಲ್ಲ. ಸರ್ಕಾರ ಸಂಬಳ ಕೊಡಲ್ವಾ? ನಿಮ್ಮ ಕೆಟ್ಟ ಕೆಲಸದಿಂದ ಜನರ ಬಳಿ ನಾನು ಮಾತು ಕೇಳುವಂತಾಗಿದೆ’ ಎಂದು ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿಂದ ಎದ್ದು ಹೋಗುವುದಿಲ್ಲ
ತಾಲೂಕ ಕಚೇರಿಯ ಕೆಲವು ಸಿಬ್ಬಂದಿಯಿಂದ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಆಗುತ್ತಿದೆ. ಕ್ರಮ ಕೈಗೊಳ್ಳದಿದ್ದರೆ ಇಲ್ಲಿಂದ ಎದ್ದು ಹೋಗಲ್ಲ ಎಂದು ತಹಶೀಲ್ದಾರ್ ಕಚೇರಿ ಬಾಗಿಲಲ್ಲಿ ಚೇರು ಹಾಕಿ ಕುಳಿತು ಪ್ರತಿಭಟನೆ ನಡೆಸಿದರು. ಇದೇ ವೇಳೆ ಜಿಲ್ಲಾಧಿಕಾರಿಗೆ ಕರೆ ಮಾಡಿ ತಾಲೂಕು ಕಚೇರಿ ಸಿಬ್ಬಂದಿಯ ವರ್ತನೆ ಸರಿಪಡಿಸುವಂತೆ ಆಗ್ರಹಿಸಿದರು.
ಸಮಾಧಾನಪಡಿಸಿದ ಜಿಲ್ಲಾಧಿಕಾರಿ
ಫೋನ್ ಮೂಲಕ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಸಮಾಧಾನಪಡಿಸಿದ ಜಿಲ್ಲಾಧಿಕಾರಿ, ಸಂಜೆಯೊಳಗೆ ಇಂಗ್ಲೀಷ್ ಭಾಷೆಯಲ್ಲಿ ಜಾತಿ ಪ್ರಮಾಣಪತ್ರ ನೀಡಲಾಗುತ್ತದೆ. ಕಚೇರಿ ಸಿಬ್ಬಂದಿ ವರ್ತನೆ ಕುರಿತು ಸಮಗ್ರ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಕಚೇರಿ ಬಾಗಿಲಲ್ಲಿ ನೀವು ಕುಳಿತರೆ ಕಂದಾಯ ಇಲಾಖೆ ಆಡಳಿತಕ್ಕೆ ಮುಜುಗರ ಆಗಲಿದೆ ಎಂದರು. ಇದರಿಂದ ಸಮಾಧಾನಗೊಂಡ ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನೆ ಕೈ ಬಿಟ್ಟರು.
ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ
ಬಳಿಕ ಸಬ್ ರಿಜಿಸ್ಟ್ರಾರ್ ಕಚೇರಿ, ಕಸಬಾ ನಾಡಕಚೇರಿಗೂ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾರ್ವಜನಿಕರ ಕೆಲಸಗಳು ಶೀಘ್ರ ಮುಗಿಯಬೇಕು. ಕಿರಿಕಿರಿ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಸೊಪ್ಪುಗುಡ್ಡ ರಾಘವೇಂದ್ರ, ತಳಲೆ ಪ್ರಸಾದ್ ಇದ್ದರು.
ಇದನ್ನೂ ಓದಿ – ತೆಪ್ಪ ಮುಳುಗಿ ಭದ್ರಾ ಹಿನ್ನೀರಿನಲ್ಲಿ ಶಿವಮೊಗ್ಗದ ಮೂವರು ಯುವಕರು ನಾಪತ್ತೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200