ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಜುಲೈ 2020
ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣ, ಯಡಿಯೂರಪ್ಪ ಅವರ ಕನಸಿ ಯೋಜನೆಗಳಲ್ಲೊಂದು. ಇವತ್ತು ಇದೇ ಖಾಸಗಿ ಬಸ್ ನಿಲ್ದಾಣಕ್ಕೆ ಮುಖ್ಯಮಂತ್ರಿ ಅವರು ಭೇಟಿ ನೀಡಿದರೆ, ಹೌಹಾರುವುದು ಖಚಿತ. ಅದಕ್ಕೆ ಕಾರಣ, ಖಾಸಗಿ ಬಸ್ ನಿಲ್ದಾಣದ ದುಸ್ಥಿತಿ.
ಹೇಗಿದೆ ಬಸ್ ನಿಲ್ದಾಣದ ಸ್ಥಿತಿ?
ಸ್ವಾಗತ ಕೋರುತ್ತಾರೆ ಭಿಕ್ಷುಕರು | ಖಾಸಗಿ ಬಸ್ ನಿಲ್ದಾಣಕ್ಕೆ ಯಾರೆ ಬಂದರೂ ಮೊದಲು ಸ್ವಾಗತಕಾರರಂತೆ ಕಾಣುವುದು ಭಿಕ್ಷುಕರು. ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮಲಗಿರುವ ಭಿಕ್ಷುಕರು ಮತ್ತು ಮದ್ಯವೆಸಿನಿಗಳು ಪ್ರಯಾಣಿಕರಿಗೆ ಆತಂಕ ಮೂಡಿಸುತ್ತಿದ್ದಾರೆ. ಈ ಹಿಂದೆ ಇಲ್ಲಿರುವ ಭಿಕ್ಷಕರನ್ನು ನಿರ್ಗತಿಕ ಕೇಂದ್ರಕ್ಕೆ ಸೇರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದರು. ಆದರೆ ಆ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ.
ಪ್ಲಾಟ್ಫಾರಂನಲ್ಲಿ ರಾಶಿ ರಾಶಿ ಕಸ | ನಿಲ್ದಾಣದ ಆ ತುದಿಯಿಂದ ಈ ತುದಿಯವರೆಗೆ ಎಲ್ಲೆಡೆ ರಾಶಿ ರಾಶಿ ಕಸ ಬಿದ್ದಿದೆ. ಬಸ್ಸುಗಳು ನಿಲ್ಲುವ ಜಾಗದಲ್ಲೂ ಕಸ ಬಿದ್ದಿದೆ. ಇಲ್ಲಿರುವ ಕಸದ ರಾಶಿಯನ್ನು ಗಮನಿಸಿದರೆ, ಇದು ಬಸ್ ನಿಲ್ದಾಣವೋ, ಕಸದ ಡಂಪಿಂಗ್ ಯಾರ್ಡೋ ಅನ್ನೋ ಗುಮಾನಿ ಮೂಡುತ್ತದೆ.
ಎಣ್ಣೆ ಪ್ಯಾಕೆಟ್, ಗುಟ್ಕಾ ಚಿತ್ತಾರ | ಲಾಕ್ ಡೌನ್ ಬಳಿಕ ಖಾಸಗಿ ಬಸ್ ಸಂಚಾರ ಸ್ಥಗಿತವಾಗಿತ್ತು. ಈಗ ಬೆರಳೆಣಿಕೆಯಷ್ಟು ಬಸ್ಗಳಷ್ಟೇ ರಸ್ತೆಗಿಳಿದಿವೆ. ಇದೇ ಕಾರಣಕ್ಕೋ ಏನೋ ಬಸ್ ನಿಲ್ದಾಣ ಕೆಲವರ ಪಾಲಗೆ ಬಾರ್ ಅಂಡ್ ರಸ್ಟೋರೆಂಟ್ ಆಗಿದೆ. ಇನ್ನೂ ಕೆಲವರಿಗೆ ಕಂಡ ಕಂಡಲ್ಲಿ ಗುಟ್ಕಾ ಹಾಕಿ ಉಗಿಯೋ ತಾಣವಾಗಿಬಿಟ್ಟಿದೆ. ಹಾಗಾಗಿ ನಿಲ್ದಾಣದ ತುಂಬೆಲ್ಲ ಗೋಡೆಗಳ ಮೇಲೆ ಗುಟ್ಕಾದಿಂದ ರಂಗೋಲಿ ಬಿಡಿಸಿದಂತೆ ಆಗಿದೆ. ಎಲ್ಲೆಡೆ ಮದ್ಯದ ಬಾಟಲಿ, ಪೌಚುಗಳು ಕಾಣಸಿಗುತ್ತವೆ.
ಮೂಗು ಮುಚ್ಚಿ ಶಿವಮೊಗ್ಗ ಒನ್ ಕಡೆಗೆ | ಬಸ್ಸುಗಳು ಕಡಿಮೆ ಇದ್ದರೂ ಜನರು ಮಾತ್ರ ನಿರಂತರವಾಗಿ ನಿಲ್ದಾಣಕ್ಕೆ ಬರುತ್ತಿದ್ದಾರೆ. ಅದಕ್ಕೆ ಕಾರಣ ಖಾಸಗಿ ಬಸ್ ನಿಲ್ದಾಣದ ಮೇಲಿರುವ ಶಿವಮೊಗ್ಗ ಒನ್ ಕೇಂದ್ರ. ಕರೆಂಟ್ ಬಿಲ್, ನೀರಿನ ಬಿಲ್ ಪಾವತಿ ಸೇರಿದಂತೆ ವಿವಿಧ ಸೇವೆಗಳಿಗಾಗಿ ಜನ ಶಿವಮೊಗ್ಗ ಒನ್ಗೆ ಬರುತ್ತಿದ್ದಾರೆ. ಆದರೆ ಈ ಕೇಂದ್ರಕ್ಕೆ ಹೋಗಲು ಮಾಸ್ಕ್ ತೊಟ್ಟರಷ್ಟೇ ಸಾಲದು, ಕಣ್ಣು ಮುಚ್ಚಿಕೊಂಡು ಮೆಟ್ಟಿಲು ಹತ್ತಬೇಕಿದೆ.
ಮಿನಿ ಬಾರ್ ಆಯ್ತು ಬೇಬಿ ಕೇರ್ ಸೆಂಟರ್ | ಪುಟ್ಟ ಕಂದಮ್ಮಗಳ್ಳನ್ನು ಎತ್ತಿಕೊಂಡು ಬರುವ ಮಹಿಳೆಯರು ಹಾಲುಣಿಸಲು ಅನುಕೂಲವಾಗಲಿ ಎಂದು ಬೇಬಿ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಆದರೆ ಈ ಸೆಂಟರ್ನ ಬಾಗಿಲು ಮುರಿದು, ಇದನ್ನೇ ಬಾರ್ ಮಾಡಿಕೊಂಡಂತಿದೆ. ಕೇರ್ ಸೆಂಟರ್ನ ಒಳಗೆ ಕಣ್ಣಾಡಿಸಿದರೆ ಬರಿ ಮದ್ಯದ ಪೌಚುಗಳೇ ಕಾಣಿಸುತ್ತವೆ.
ಅನೈತಿಕ ಚಟುವಟಿಕೆ | ಇದಿಷ್ಟೇ ಅಲ್ಲ, ಖಾಸಗಿ ಬಸ್ ನಿಲ್ದಾಣ ಅನೈತಿಕ ಚಟುವಟಿಕೆಯ ತಾಣವಾಗಿದೆ ಎಂಬ ಆರೋಪವಿದೆ. ಇದೇ ಕಾರಣಕ್ಕೆ ಬಸ್ ನಿಲ್ದಾಣದೊಳಗೆ ಪ್ರಯಾಣಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಚಾಲಕ, ನಿರ್ವಾಹಕರು ಆರೋಪಿಸುತ್ತಾರೆ. ಇವರ ಆರೋಪಗಳಿಗೆ ಪುಷ್ಠಿ ನೀಡುವ ಹಲವು ಸಂಗತಿಗಳು ಬಸ್ ನಿಲ್ದಾಣದಲ್ಲಿ ಕಾಣಿಸುತ್ತವೆ.
ಪಾಲಿಕೆಯಿಂದ ಇಷ್ಟೊಂದು ನಿರ್ಲಕ್ಷ್ಯವೇಕೆ?
ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಯದ ಜವಾಬ್ದಾರಿ ಶಿವಮೊಗ್ಗ ಮಹಾನಗರ ಪಾಲಿಕೆಯದ್ದು. ಲಾಕ್ ಡೌನ್ ಆದಾಗಿನಿಂದ ಬಸ್ ನಿಲ್ದಾಣದ ಕಡೆ ಪಾಲಿಕೆ ಅಧಿಕಾರಿಗಳು ಹೆಜ್ಜೆಯನ್ನೇ ಹಾಕಿಲ್ಲ. ಅದರ ಪರಿಣಾಮವೇ ಬಸ್ ನಿಲ್ದಾಣದ ಇವತ್ತಿನ ದುಸ್ಥಿತಿ. ಪ್ರತಿದಿನ ನೂರಾರು ಜನರು ಬಂದು ಹೋಗುವ ಜಾಗ. ಮೊದಲೇ ಎಲ್ಲರು ಕರೋನ ಆತಂಕದಲ್ಲಿದ್ದಾರೆ. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ, ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಪಾಲಿಕೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಪಾಲಿಕೆ ಅಧೀನದಲ್ಲಿರುವ ಬಸ್ ನಿಲ್ದಾಣದಲ್ಲಿ ಆತಂಕದ ವಾತವರಣವಿದೆ.
ಯಡಿಯೂರಪ್ಪ ಅವರ ಕನಸಿನ ಯೋಜನೆ
ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಯೋಜನೆಗಳಲ್ಲಿ ಒಂದು. ಅವರು ಈ ಹಿಂದೆ ಸಿಎಂ ಆಗಿದ್ದಾಗ ಬಸ್ ನಿಲ್ದಾಣ ಸಿದ್ಧವಾಗಿದ್ದು. ಈಗ ಯಡಿಯೂರಪ್ಪ ಅವರು ಇದೇ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ಕೊಟ್ಟರೆ, ಹೌಹಾರುವುದು ಖಚಿತ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]